ನವದೆಹಲಿ: ನೋಟು ಅಮಾನ್ಯೀಕರಣ ಮತ್ತು ರಾಫೆಲ್ ಡೀಲ್ ಬಗ್ಗೆ ವರದಿ ನೀಡಲು ಸಿಎಜಿ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ ಎಂದು ಸುಮಾರು 60 ನಿವೃತ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಿಎಜಿಗೆ ಪತ್ರ ಬರೆದಿರುವ ನಿವೃತ್ತ ಅಧಿಕಾರಿಗಳು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಾರದು ಎಂಬ ಉದ್ದೇಶದಿಂದ ನೋಟ್ ಬ್ಯಾನ್ ಮತ್ತು ರಾಫೆಲ್ ಡೀಲ್ ಕುರಿತು ಸಿಎಜಿ ವರದಿ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿಯ ಕುರಿತು ಮತ್ತು ನೋಟು ಅಮಾನ್ಯೀಕರಣದ ಆಡಿಟ್ ವರದಿಯನ್ನು ಅನಧಿಕೃತವಾಗಿ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಿವೃತ್ತ ಅಧಿಕಾರಿಗಳು, ಈ ಕುರಿತ ಸಿಎಜಿ ವರದಿಯನ್ನು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೋಟ್ ಬ್ಯಾನ್ ಮತ್ತು ರಾಫೆಲ್ ಡೀಲ್ ಕುರಿತ ಆಡಿಟ್ ವರದಿಯನ್ನು ಸಕಾಲದಲ್ಲಿ ಮಂಡಿಸುವಲ್ಲಿ ಸಿಎಜೆ ವಿಫಲವಾಗಿದ್ದು, ಇದನ್ನು ಪಕ್ಷಪಾತದ ಕ್ರಮವೆಂದು ಪರಿಗಣಿಸಬಹುದು ಮತ್ತು ಸಂಸ್ಥೆಯ ವಿಶ್ವಾಸರ್ಹತೆಗೆ ಧಕ್ಕೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿವೃತ್ತ ಅಧಿಕಾರಿಗಳ ಪತ್ರದ ಬಗ್ಗೆ ಮಹಾಲೇಖಪಾಲ(ಸಿಎಜಿ) ಶಶಿಕಾಂತ್ ಶರ್ಮಾ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos