ದೇಶ

ರಾಫೆಲ್ ವಿವಾದ: ಈಗಲೇ ದರ ಕುರಿತು ವಾದ ಬೇಡ, ವಾಯು ಸೇನೆ ಸ್ಪಷ್ಟನೆ ನೀಡಲಿ: ಸುಪ್ರೀಂ ಕೋರ್ಟ್

Srinivasamurthy VN
ನವದೆಹಲಿ: ಪ್ರಸ್ತುತ ರಾಫೆಲ್ ಜೆಟ್ ವಿಮಾನದ ದರಗಳ ಕುರಿತು ವಾದ-ಪ್ರತಿವಾದ ಬೇಡ. ವಿವಾದ ಸಂಬಂಧ ಮೊದಲು ಭಾರತೀಯ ಸೇನೆ ಸ್ಪಷ್ಟನೆ ನೀಡಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಡೀ ದೇಶದ ಗಮನ ಸೆಳೆದಿರುವ ರಾಫೆಲ್ ಜೆಟ್ ವಿಮಾನ ಖರೀದಿ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಇಂದಿನಿಂದ ಮಹತ್ವದ ವಿಚಾರಣೆ ಆರಂಭವಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್, ನ್ಯಾ, ಎಸ್ ಕೆ ಕೌಲ್ ಮತ್ತು ಕೆಎಂ ಜೋಸೆಫ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಪ್ರಶಾಂತ್ ಭೂಷಣ್ ರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಲಯ ನಿಮಗೆ ಸಂಪೂರ್ಣ ಅವಕಾಶ ನೀಡುತ್ತಿದ್ದೇವೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಒಪ್ಪಂದದಲ್ಲಿ ಆಗಿದೆ ಎನ್ನಲಾಗುತ್ತಿರುವ ಪ್ರಮುಖಾಂಶಗಳನ್ನು ಉಲ್ಲೇಖ ಮಾಡಿ ವಾದ ಮಾಡಿ ಎಂದು ಹೇಳಿತು.
ಅಂತೆಯೇ ಇದು ದೇಶದ ರಕ್ಷಣೆ ಮಾಡುವ ವಾಯು ಸೇನೆ ಕುರಿತ ವಿಚಾರವಾಗಿದ್ದು, ಸಾರ್ವಜನಿಕ ಸಂಸ್ಥೆಯಲ್ಲಿ ದರಗಳ ಕುರಿತ ಚರ್ಚೆಗೆ ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಮೊದಲು ತಿಳಿಯಬೇಕಿದೆ. ಆಗ ಮಾತ್ರ ಈ ಬಗ್ಗೆ ಚರ್ಚೆ ಮಾಡಬಹುದು, ಈ ಬಗ್ಗೆ ತಾವು ವಾಯು ಸೇನೆಗೆ ಸೂಚನೆ ನೀಡಲಿದ್ದು, ಪ್ರಕರಣ ಸಂಬಂಧ ವಾಯುಸೇನೆ ವಿವರಣೆ ನೀಡಲಿ. ಆ ಬಳಿಕ ವಿಚಾರಣೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ನ್ಯಾಯಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಹೇಳಿದರು.
ಅಲ್ಲದೆ ಈ ಬಗ್ಗೆ ಕೇಂದ್ರ ಸರ್ಕಾರದ ಪರ ವಕೀಲರಾದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಪೀಠ, ಯುದ್ಧ ವಿಮಾನ ದರಗಳ ಕುರಿತ ವಾದ ನಡೆಸಬಹುದೇ ಇಲ್ಲವೇ. ಸಾರ್ವಜನಿಕ ಸಂಸ್ಥೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಬಹುದೇ ಎಂಬುದನ್ನು ಸರ್ಕಾರದೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಎಂದು ಹೇಳಿದರು. 
ಇನ್ನು ಇಂದು ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲ ಪ್ರಶಾಂತ್ ಭೂಷಣ್ ಅವರು ತಮ್ಮ ವಾದ ಮಂಡಿಸಿದರು. ಈ ವೇಳೆ ಸರ್ಕಾರ ನಿರ್ಣಯಗಳನ್ನು ಪ್ರಶ್ನಿಸಿದ ಭೂಷಣ್ ಯೋಜನೆಯನ್ನು ತ್ವರಿತಗೊಳಿಸಿದ್ದು, ಅನುಭವವೇ ಇಲ್ಲದ ರಿಲಯನ್ಸ್ ಸಂಸ್ಥೆಗೆ ಮಣೆಹಾಕಿದ್ದು, ಎಚ್ಎಎಲ್ ಕಡೆಗಣನೆ, 126 ವಿಮಾನಗಳ ಬದಲಿಗೆ 36 ವಿಮಾನಗಳ ಖರೀದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದು, ತಂತ್ರಜ್ಞಾನ ಹಂಚಿಕೆ ಕುರಿತ ಒಪ್ಪಂದದ ತಿದ್ದುಬಪಡಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಪ್ರಶಾಂತ್ ಭೂಷಣ್ ಮುಂದಿಟ್ಟರು.
SCROLL FOR NEXT