ದೇಶ

ಸಿಬಿಐ ಒಳಜಗಳ: ನ.19ರೊಳಗೆ ಸಿವಿಸಿ ವರದಿಗೆ ಪ್ರತಿಕ್ರಿಯೆ ನೀಡಲು ಅಲೋಕ್ ವರ್ಮಾಗೆ 'ಸುಪ್ರೀಂ'ಆದೇಶ

Sumana Upadhyaya

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಜಾಗೃತ ಆಯೋಗದ ವರದಿಯನ್ನು(ಸಿವಿಸಿ) ಮುಚ್ಚಿದ ಲಕೋಟೆಯಲ್ಲಿ ನೀಡಿ ಅದಕ್ಕೆ ಬರುವ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಕೇಂದ್ರ ಜಾಗೃತ ಆಯೋಗದ ವರದಿಯನ್ನು ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸಹ ನೀಡಬೇಕೆಂದು ಹೇಳಿದೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್  ನ್ಯಾಯಾಧೀಶರು, ಅಲೋಕ್ ವರ್ಮಾ ಮೇಲೆ ಕೇಳಿಬರುತ್ತಿರುವ ಆರೋಪಗಳ ಕುರಿತು ನೀಡಿರುವ ಸಿವಿಸಿ ವರದಿ ತುಂಬಾ ಪ್ರಶಂಸಾತ್ಮಕವಾಗಿಲ್ಲ, ಅವರ ವಿರುದ್ಧವಾಗಿದೆ. ಹೀಗಾಗಿ ಕೆಲವು ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ  ನೀಡಲಾದ ವರದಿಗೆ ಸೋಮವಾರದೊಳಗೆ ಉತ್ತರ ನೀಡಬೇಕೆಂದು ನ್ಯಾಯಾಧೀಶರು ಹೇಳಿದರು.

ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಿದೆ. ಸಿವಿಸಿ ವರದಿಯನ್ನು ತಮಗೆ ನೀಡಬೇಕೆಂದು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮಾಡಿರುವ ಮನವಿಯನ್ನು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದೆ.

SCROLL FOR NEXT