ಛತ್ತೀಸ್ ಗಢ : ಸೋನಿಯಾಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಸಲುವಾಗಿ ದಲಿತ ನಾಯಕ ಸೀತಾರಾಮ್ ಕೇಸರಿ ಅಧಿಕಾರ ಪೂರ್ಣಗೊಳಿಸುವ ಮುನ್ನಾವೇ ಅವರನ್ನು ಪಕ್ಷದಿಂದ ಹೊರಗೆ ದಬ್ಬಲಾಯಿತು ಎಂದು ಕಾಂಗ್ರೆಸ್ ಹಾಗೂ ನೆಹರು-ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್ ಗಢ ವಿಧಾನಸಭೆಯ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ಪ್ರಚಾರದ ಕಡೆಯೇ ದಿನವಾದ ಇಂದು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಒಂದೇ ಕುಟುಂಬದ ನಾಲ್ಕು ತಲೆಮಾರಿನವರು ದೇಶವನ್ನು ಆಳಿದ್ದಾರೆ. ಅಧಿಕಾರದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ, ಅವರ ಆಡಳಿತದಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದಲಿತ ನಾಯಕ ಸೀತಾರಾಮ್ ಕೇಸರಿ ಐದು ವರ್ಷ ಪೂರ್ಣಗಳೊಳಿಸಲು ಕಾಂಗ್ರೆಸ್ ಬಿಡಲಿಲ್ಲ. ಇದನ್ನು ದೇಶ ನೋಡಿದೆ. ಸೋನಿಯಾಗಾಂಧಿ ಹಾದಿ ಸುಗಮಗೊಳಿಸಲು ಅವರನ್ನು ಕಚೇರಿಯಿಂದ ಹೊರ ಹಾಕಿ ಬೀದಿಗೆ ತಳ್ಳಲಾಯಿತು ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾಗಲು ಯೋಗ್ಯತೆ ಇರುವ ಗಾಂಧಿ ಕುಟುಂಬಕ್ಕೆ ಸೇರದೆ ಇರುವ ಯಾವುದೇ ನಾಯಕನನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಿ ಎಂದು ನರೇಂದ್ರ ಮೋದಿ ಸವಾಲು ಹಾಕಿದರು.