ನವದೆಹಲಿ: ಹಿಂದೊಮ್ಮೆ ಬಿಜೆಪಿಯಲ್ಲಿದ್ದುಕೊಂಡು ಈಗ ಕಾಂಗ್ರೆಸ್ ಸೇರಿ ಪ್ರಧಾನಿ ಮೋದಿ ನೇತೃತ್ವದ ಟೀಕಾಕಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದಲ್ಲಿ ಕೈಗೊಂಡ ಆ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, "ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ತುಂಬು ಹೃದಯದಿಂದ ಧನ್ಯವಾದ ತಿಳಿಸುತ್ತೇನೆ" ಎಂದು ಹೇಳಿದ್ದಾರೆ.
ಗುರುದಾಸ್ ಪುರ ಜಿಲ್ಲೆ ಅಂತರರಾಷ್ಟ್ರೀಯ ಗಡಿಯಲ್ಲಿನ ಡೇರಾ ಬಾಬಾ ನಾನಕ್ ನಿಂದ ಕರ್ತಾರ್ ಪುರ ವರೆಗಿನ ಕಾರಿಡಾರ್ ಅಭಿವೃದ್ದಿಗೆ ನ.22 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ವಿಷಯವಾಗಿ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರದ ನಿರ್ಧಾರ 12 ಕೋಟಿ ನಾನಕ್ ಭಕ್ತಾದಿಗಳಿಗೆ ಸಂತಸದ ಸುದ್ದಿಯಾಗಿದೆ, ಕಾರಿಡಾರ್ ನಿರ್ಮಾಣ ಸೇತುವೆಗಳನ್ನು ನಿರ್ಮಿಸಲಿದೆ. ದ್ವೇಷವನ್ನು ಹೋಗಲಾಡಿಸಲಿದೆ. ಎರಡು ರಾಷ್ಟ್ರಗಳ ನಡುವೆ ಸೌಹಾರ್ದತೆಯನ್ನು ಉಂಟುಮಾಡಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ರಾವಿ ನದಿ ತೀರದಲ್ಲಿನ ಕರ್ತಾರ್ ಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಸಿಖ್ಖ್ ಯಾತ್ರಿಗಳಿಗಾಗಿ ಪಂಜಾಬಿನ ಅಂತರಾಷ್ಟ್ರೀಯ ಗಡಿಯಲ್ಲಿನ ಪಂಜಾಬಿನ ಗುರುದಾಸ್ ಪುರ ಜಿಲ್ಲೆ ಡೇರಾ ಬಾಬಾ ನಾನಕ್ ನಿಂದ ವಿಶೇಷ ಕಾರಿಡಾರ್ ನಿರ್ಮಾಣ ಮಾಡಲು ಕೆಂದ್ರ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕ್ ಸೇನಾ ಮುಖ್ಯಸ್ಥರು ಕರ್ತಾರ್ ಪುರ ಕಾರಿಡಾರ್ ತೆರೆಯುವುದಕ್ಕೆ ಶ್ರಮಿಸುತ್ತಿರುವುದರ ಬಗ್ಗೆ ಹೇಳಿದ್ದರು ಎಂಬುದನ್ನು ಸಿಧು ಇದೇ ವೇಳೆ ಸ್ಮರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos