ಹೈದರಾಬಾದ್: ಹಣ ನೀಡಿ ಮತ ಕೇಳುವುದು ಸಾಮಾನ್ಯ.. ಆದರೆ ತೆಲಂಗಾಣದಲ್ಲಿ ಓರ್ವ ಅಭ್ಯರ್ಥಿ ಮತದಾರರ ಕೈಗೆ ಚಪ್ಪಲಿ ಕೊಟ್ಟ ಕೆಲಸ ಮಾಡದಿದ್ದರೆ ಇದರಿಂದಲೇ ನನ್ನನ್ನು ಹೊಡೆಯಿರಿ ಎಂದು ಹೇಳುವ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಹೌದು... ತೆಲಂಗಾಣ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಮತದಾನದ ದಿನಾಂಕ ಹತ್ತಿರಾವಾಗುತ್ತಿದ್ದಂತೆಯೇ ಮತದಾರರ ಸೆಳೆಯಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಏತನ್ಮಧ್ಯೆ ಪಕ್ಷೇತರ ಅಭ್ಯರ್ಥಿಯೊಬ್ಬರು ಮತ ಕೇಳುತ್ತಿರುವ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮತದಾರರ ಕೈಗೆ ಚಪ್ಪಲಿ ಕೊಟ್ಟು ಅಭ್ಯರ್ಥಿ ಮತಕೇಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ತೆಲಂಗಾಣದ ಕೊರುಟ್ಲಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಮನೆಮನೆ ಪ್ರಚಾರಕ್ಕೆ ತೆರಳುವಾಗ ಪ್ರತಿಮನೆಯ ಸದಸ್ಯರ ಕೈಗೂ ಚಪ್ಪಲಿಯೊಂದನ್ನು ನೀಡುತ್ತಿದ್ದಾರೆ. ಟಿಆರ್ಎಸ್ ಸೀನಿಯರ್ ಲೀಡರ್ ವಿದ್ಯಾಸಾಗರ್ ರಾವ್ ಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ಅಕುಲ ಹನುಮಂತ ಎಂಬವರು ಮೆಟ್ಟುಪಲ್ಲಿಯಲ್ಲಿ ಮನೆಮನೆ ಪ್ರಚಾರದಲ್ಲಿ ತೊಡಗಿದ್ದ ವೇಳೆ, ಅಲ್ಲಿನ ಗ್ರಾಮಸ್ಥರ ಕೈಗೆ ಚಪ್ಪಲಿ ಕೊಟ್ಟು ಕೈ ಮುಗಿದು ವೋಟ್ ಕೇಳುತ್ತಿದ್ದಾರೆ. ಹಾಗಂತ ಅವರ ಚಿಹ್ನೆ ಚಪ್ಪಲಿಯಲ್ಲ. ಬದಲಾಗಿ, ಚಪ್ಪಲಿ ಮೂಲಕ ಜನರಿಗೆ ಆಶ್ವಾಸನೆ ನೀಡುತ್ತಿರುವ ಅವರು ತಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಇದೇ ಚಪ್ಪಲಿಯಲ್ಲಿ ತಮಗೆ ಹೊಡೆಯಿರಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಕೆಲ ದಶಕಗಳಿಂದಲೂ ಇಲ್ಲಿ ಟಿಆರ್ ಎಸ್ ಪ್ರಭಾವವಿದೆ. ಆದರೆ ಗೆದ್ದ ಅಭ್ಯರ್ಥಿಗಳಿಂದ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಹೀಗಾಗಿ ಈ ಬಾರಿ ಖುದ್ಧು ತಾವೇ ನಿಂತಿದ್ದು, ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದೇನೆ. ಹೀಗಾದರೂ ಜನರು ತಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಲಿ ಎಂಬುದು ನನ್ನ ಉದ್ದೇಶ ಎಂದು ಹೇಳಿಕೊಂಡಿದ್ದಾರೆ.