ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ 'ಹಿಂದೂ - ಮುಸ್ಲಿಮರನ್ನು ಒಡೆಯುವ ಕಾಯಿಲೆ ಇದೆ ಎಂದು ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶುಕ್ರವಾರ ಆರೋಪಿಸಿದ್ದಾರೆ.
ಇಂದು ನರ್ಸಂಪೇಟ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಟಿಆರ್ ಎಸ್ ಮುಖ್ಯಸ್ಥ, ಪ್ರಧಾನಿಗೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುವ ಹೃದಯವಿಲ್ಲ. ಮೋದಿಗೆ ಮತ್ತು ಬಿಜೆಪಿಗೆ 'ಕೋಮುವಾದಿ ಹುಚ್ಚು' ಹಿಡಿದಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರಿ ನೌಕರಿಯಲ್ಲಿರುವ ಮುಸ್ಲಿಮರ ಮೀಸಲಾತಿಯನ್ನು ಶೇ.4ರಿಂದ ಶೇ.12ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಬೇಕು ಎಂದು ನಿರ್ಣಯ ಕೈಗೊಂಡಿದ್ದರೂ ಕೇಂದ್ರ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಕೆಸಿಆರ್ ಆರೋಪಿಸಿದರು.
ಮೋದಿ ಮತ್ತು ಬಿಜೆಪಿ ಒಂದು ಕಾಯಿಲೆ ಇದೆ. ಪ್ರತಿಯೊಂದು ವಿಚಾರದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜನೆ ಮಾಡಲು ನೋಡುತ್ತಾರೆ. ಇದರ ಹೊರತು ಅವರಿಗೆ ಬೇರೆ ಏನೂ ಗೊತ್ತಿಲ್ಲ ಎಂದರು.
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 17 ಲೋಕಸಭಾ ಕ್ಷೇತ್ರದಲ್ಲಿ ಜನ ಟಿಆರ್ ಎಸ್ ಅನ್ನು ಗೆಲ್ಲಿಸಿದರೆ ಮೀಸಲಾತಿಯನ್ನು ಹೆಚ್ಚಿಸುವಂತೆ ನೋಡಿಕೊಳ್ಳಲಾಗುವುದು ಎಂದು ಚಂದ್ರಶೇಖರ್ ರಾವ್ ಭರವಸೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos