ಹೈದ್ರಾಬಾದ್ : ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 2 ಲಕ್ಷ ರೂವರೆಗೂ ರೈತರ ಸಾಲ ಮನ್ನಾ, ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ, ಪ್ರತಿವರ್ಷ ಒಂದು ಲಕ್ಷ ಜನರಿಗೆ ಉಚಿತವಾಗಿ ಹಸು ವಿತರಿಸುವುದಾಗಿ ಭರವಸೆ ನೀಡಲಾಗಿದೆ.
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಲಕ್ಷ್ಮಣ್ ಇಂದು ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ, ಹಣ ಮತ್ತಿತರ ಆಮಿಷವೊಡ್ಡಿ ಬಲವಂತದಿಂದ ಧರ್ಮಾಂತರ ಮಾಡುವುದಕ್ಕೆ ಶಾಸನದ ಮೂಲಕ ತಡೆಹಾಕಲಾಗುವುದು ಎಂದು ಭರವಸೆ ನೀಡಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ರೋಹಿಂಗ್ಯಾ ಜನರನ್ನು ವಾಪಾಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ಕೊಳಬೆ ಬಾವಿ ತೋರಿಸಿ ಗುಣಮಟ್ಟದ ಬೀಜ ವಿತರಣೆ ಮಾಡುವುದಾಗಿ ಹೇಳಲಾಗಿದೆ.
7ರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್. ಪದವಿ ಹಾಗೂ ಅದಕ್ಕೂ ಮೇಲ್ಪಟ್ಟ ವಿದ್ಯಾರ್ಥಿನಿಯರು ಸ್ಕೂಟಿ ಪಡೆಯಲು ಶೇ.50 ರಷ್ಟು ಸಹಾಯ ಧನ ನೀಡಲಾಗುವುದು, 2022ರೊಳಗೆ ಎಲ್ಲಾ ಬಡವರಿಗೂ ಮನೆ ಕಟ್ಟಿಸಿಕೊಳ್ಳಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ.