ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಘಾತಕಾರಿ ಹೊಸ ಟ್ರೆಂಡ್ ವೊಂದು ಆರಂಭವಾಗಿದ್ದು, ವಿಶ್ವವಿದ್ಯಾಲಯಗಳಿಂದ ಪಿಎಚ್ ಡಿ ಹಾಗೂ ಸ್ನಾತಕೋತ್ತರ ಪದವೀಧರರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದಾರೆ.
ಕಳೆದ ಜನವರಿಯಲ್ಲಿ ಅಲಿಗಢ ಮುಸ್ಲಿಂ ವಿವಿಯ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ, ಕುಪ್ವಾರದ ಮನಾನ್ ವನಿ ತನ್ನ ಪಿಎಚ್ ಡಿಗೆ ಗುಡ್ ಬೈ ಹೇಳಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದರು. ಅಲ್ಲದೆ 'ಭಾರತೀಯ ಪಡೆಗಳೊಂದಿಗೆ ಘನತೆಯಿಂದ ಹೋರಾಡಬೇಕು' ಎಂದು ಮನನ್ ಹೇಳಿದ್ದರು.
ನಂತರ ಮೇ ತಿಂಗಳಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ರಫಿ ಭಟ್ ಅವರು ಉಗ್ರ ಸಂಘಟನೆ ಸೇರಿದ್ದರು. ಆದರೆ ಹಿಜ್ಬುಲ್ ಮುಜಾಹಿದ್ದೀನ್ ಸೇರಿದ ಮಾರನೇ ದಿನವೇ ಪ್ರಾಧ್ಯಾಪಕ ಎನ್ ಕೌಂಟರ್ ಗೆ ಬಲಿಯಾಗಿದ್ದರು.
ಕಳೆದ ಸೆಪ್ಟೆಂಬರ್ ನಲ್ಲಿ ಎಂಬಿಎ ಪದವೀಧರ ಹರೂನ್ ಅಬ್ಬಾಸ್ ವನಿ ಎಕೆ-47 ರೈಫಲ್ ಹಿಡಿದ ಫೋಟ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಔಷಧಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರೂನ್, ತಾನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿರುವುದಾಗಿ ಘೋಷಿಸಿಕೊಂಡಿದ್ದ.
ಹರೂನ್, ಭಟ್ ಮತ್ತು ವನಿ ಮಾತ್ರವಲ್ಲಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹಲವು ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದು, 2016ರಲ್ಲಿ 21 ವರ್ಷದ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯ ನಂತರ ಈ ಟ್ರೆಂಡ್ ಹೆಚ್ಚಾಗಿದೆ ಎಂದು ಸಂಡೇ ಸ್ಟ್ಯಾಂಡರ್ಡ್ ವಿಶ್ಲೇಷಿಸಿದೆ.