ಗುಜರಾತ್ ಬಿಟ್ಟು ಹೊರನಡೆದ 20,000 ಜನ ಹಿಂದಿ ಭಾಷಿಕರು: ಶಾಂತಿ ಕಾಪಾಡಲು ಸಿಎಂ ವಿಜಯ್ ರೂಪಾನಿ ಕರೆ
ಅಹ್ಮದಾಬಾದ್: ಗುಜರಾತ್ ನಲ್ಲಿ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿದ್ದು, ಈ ವರೆಗೂ 20,000 ಕ್ಕೂ ಹೆಚ್ಚು ಹಿಂದಿ ಭಾಷಿಕರು ರಾಜ್ಯ ತೊರೆದಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ವಲಯಗಳಲ್ಲಿ ವಲಸಿಗರ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಗುಜರಾತ್ ನಲ್ಲಿದ್ದ ಸುಮಾರು 20,000 ಹಿಂದಿ ಭಾಷಿಕರು ಗುಜರಾತ್ ನಿಂದ ಹೊರ ನಡೆದಿದೆ ಎಂದು ಸಂಘಟನೆಯೊಂದು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕಳೆದ 48 ಗಂಟೆಗಳಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಅಹಿತಕರ ಘಟನೆಗಳು ನಡೆದಿಲ್ಲ, ಜನತೆ ಶಾಂತಿಯಿಂದ ವರ್ತಿಸಬೇಕು ಎಂದು ಕರೆ ನೀಡಿದ್ದಾರೆ. ಕೈಗಾರಿಕಾ ವಲಯಗಳಲ್ಲಿ ವಲಸಿಗರ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಪ್ರದೀಪ್ ಸಿನ್ಹ್ ಜಡೇಜಾ ಹೇಳಿದ್ದಾರೆ.
ಉತ್ತರ ಭಾರತೀಯ ವಿಕಾಸ್ ಪರಿಷತ್ ನ ಅಧ್ಯಕ್ಷ ಮಹೇಶ್ ಸಿಂಗ್ ಕುಶ್ವಾ ಈ ಬಗ್ಗೆ ಮಾತನಾಡಿದ್ದು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯದ 20,000 ಜನರು ರಾಜ್ಯದಲ್ಲಿರುವ ಪರಿಸ್ಥಿತಿಯಿಂದಾಗಿ ವಲಸೆ ಹೋಗಿದ್ದಾರೆ. ರಾಜ್ಯದಲ್ಲಿ ಹಿಂದಿ ಭಾಷಿಕರ ಮೇಲೆ ರಾಜ್ಯದಲ್ಲಿ ದಾಳಿ ನಡೆಸಲಾಗುತ್ತಿದೆ ಎಂಬ ಅಭದ್ರತೆ ಕಾಡುತ್ತಿದ್ದು, 20,000 ಜನರು ಗುಜರಾತ್ ನಿಂದ ತೆರಳಿದ್ದಾರೆ ಎಂದು ಹೇಳಿದ್ದಾರೆ.
ಸಬರ್ಕಂಠ ಪ್ರದೇಶದಲ್ಲಿ ಸೆ.28 ರಂದು 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಬೆಳಗಿಗೆ ಬಂದಿದ್ದು ಪ್ರಕರಣದಲ್ಲಿ ಬಿಹಾರದ ನೌಕರನೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆಯ ನಂತರದ ದಿನಗಳಲ್ಲಿ ಹಿಂದಿ ಭಾಷಿಕರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿಗಳೂ ಸಹ ಹೇಳಿದ್ದಾರೆ. ಹಿಂದಿ ಭಾಷಿಕರ ವಿರುದ್ಧ ನಡೆದಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರೆಗೂ 400 ಜನರನ್ನು ಬಂಧಿಸಲಾಗಿದ್ದು 56 ಎಫ್ಐ ಆರ್ ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos