ಮುಂಬೈ: ಭೀಮಾ ಕೊರೆಗಾಂವ್ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಪುಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ನ್ನು ಪ್ರಶ್ನಿಸಿರುವ ಗೌತಮ್ ನವ್ಲಾಖಾ, ತಮ್ಮ ವಿರುದ್ಧ ಮುಂಬೈ ಪೊಲೀಸರು ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅರ್ಜಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಅ.19 ರಂದು ಗೌತಮ್ ನವ್ಲಾಖಾ ಅರ್ಜಿಯನ್ನು ಮುಂಬೈ ಹೈ ಕೋರ್ಟ್ ನ ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಭಾರ್ತಿ ದಂಗ್ರೆ ವಿಚಾರಣೆ ನಡೆಸಲಿದ್ದಾರೆ. ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಡಿ ಗೌತಮ್ ನವ್ಲಾಖಾ, ಆಂಧ್ರದ ಸಾಹಿತಿ ವರವರ ರಾವ್ ಸೇರಿ ಒಟ್ಟು 5 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ದೆಹಲಿ ಹೈಕೋರ್ಟ್ ಈ ತಿಂಗಳ ಪ್ರಾರಂಭದಲ್ಲಿ ಬಂಧಿತರನ್ನು ಗೃಹಬಂಧನದಿಂದ ಮುಕ್ತಗೊಳಿಸಿತ್ತು.