ಅಹ್ಮದಾಬಾದ್: ಗುಜರಾತ್ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸರ್ಧಾರ್ ವಲ್ಲಭಭಾಯ್ ಪಟೇಲ್ ಅವರ ಸ್ಟ್ಯಾಚ್ಯು ಆಫ್ ಯೂನಿಟಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಡೀ ಯೋಜನೆಗೆ ಗುಜರಾತ್ ಸುಮಾರು 75 ಸಾವಿರ ಕ್ಕೂ ಅಧಿಕ ಅರಣ್ಯ ನಿವಾಸಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸರ್ಧಾರ್ ವಲ್ಲಭಬಾಯ್ ಪಟೇಲ್ ವಿಗ್ರಹ ಲೋಕಾರ್ಪಣೆಗೆ ಗುಜರಾತ್ ಸರ್ಕಾರ ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿರುವಾಗಲೇ ವಿಗ್ರಹ ಲೋಕಾರ್ಪಣೆ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿ, ತಮ್ಮ ತಮ್ಮ ಗ್ರಾಮಗಳಲ್ಲಿ ಯಾವುದೇ ರೀತಿಯ ಅಡುಗೆ ತಯಾರಿಸದಿರಲು ಅರಣ್ಯ ನಿವಾಸಿಗಳು ನಿರ್ಧರಿಸಿದ್ದಾರೆ. ಇದೇ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಸರ್ಧಾರ್ ವಲ್ಲಭಭಾಯ್ ಪಟೇಲರ ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲೇ ವಿವಿಧ ಬುಡಕಟ್ಟು ಸಂಘಟನೆಗಳ ಸುಮಾರು 75 ಸಾವಿರ ಬುಡಕಟ್ಟು ಜನಾಂಗದವರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಇಷ್ಟಕ್ಕೂ ಪ್ರತಿಭಟನೆಗೆ ಕಾರಣವೇನು?
ಇನ್ನು ಬೃಹತ್ ಪ್ರತಿಭಟನೆಗೆ ಸರ್ದಾರ್ ವಲ್ಲಭಭಾಯ್ ಪಟೇಲರಲ್ಲ... ಬದಲಿಗೆ ಗುಜರಾತ್ ಸರ್ಕಾರ ಕಾರಣವಂತೆ. ಹೌದು ಅಭಿವೃದ್ಧಿ ಹೆಸರಲ್ಲಿ ಗುಜರಾತ್ ಸರ್ಕಾರ ನಮ್ಮ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಸರ್ದಾರ್ ವಲ್ಲಭಭಾಯ್ ಪಟೇಲರ ಸ್ಮಾರಕದ ಸುತ್ತಮುತ್ತಲ ಕೃಷಿ ಭೂಮಿಯನ್ನು ಪ್ರವಾಸೋಧ್ಯಮಕ್ಕಾಗಿ ಕಸಿಯಲು ಪ್ರಯತ್ನಿಸುತ್ತಿದೆ. ನಾವು ಈ ಕೃಷಿ ಭೂಮಿಯನ್ನೇ ನಮ್ಮ ಜೀವನಾಧಾರವಾಗಿಸಿಕೊಂಡಿದ್ದೇವೆ. ಇಲ್ಲಿನ ಸುತ್ತಮುತ್ತ ಗುಡ್ಡಗಾಡು ಪ್ರದೇಶಗಳು ನಮ್ಮ ಸಾಮಾನ್ಯ ಜೀವನದಲ್ಲಿ ಬೆರೆತು ಹೋಗಿದ್ದು, ಇವುಗಳಿಂದಲೇ ನಮ್ಮನ್ನು ದೂರ ಮಾಡಲು ಯತ್ನಿಸಲಾಗುತ್ತಿದೆ. ಭವಿಷ್ಯದಲ್ಲಿ ನಮ್ಮ ಒಪ್ಪಿಗೆಯೇ ಇಲ್ಲದೇ ನಮ್ಮನ್ನು ಇಲ್ಲಿಂದ ದೂರ ಮಾಡುವ ಸಾಧ್ಯತೆಯನ್ನೂ ಕೂಡ ಅಲ್ಲಗಳೆಯುವಂತಿಲ್ಲ. ಉದ್ಯೋಗ, ಪರಿಹಾರದ ಹೆಸರಲ್ಲಿ ಬಿಡಿಗಾಸು ನೀಡಿ ನಮ್ಮನ್ನು ನಮ್ಮ ತನದಿಂದ ದೂರ ಮಾಡುವ ದೊಡ್ಡ ಸಂಚು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಅಲ್ಲದೆ ನರ್ಮದಾ ಸರೋವರ ಯೋಜನೆಗಾಗಿ ಈ ಹಿಂದೆ ಸರ್ಕಾರ ಘೋಷಣೆ ಮಾಡಿದ್ದ ಬಹುತೇಕ ಭರವಸೆಗಳು ಈಡೇರಿಲ್ಲ. ಕೆಲವರಿಗಷ್ಟೇ ಪರಿಹಾರ ಸಿಕ್ಕಿದ್ದು, ಶೇ.90ರಷ್ಟು ಸಂತ್ರಸ್ಥರು ಸಂಕಷ್ಟದಲ್ಲಿದ್ದಾರೆ. ಅಂತೆಯೇ ಯೋಜನೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಸುಮಾರು 72 ಗ್ರಾಮಗಳಲ್ಲಿ ಪ್ರತಿಮೆ ಉದ್ಘಾಟನೆ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.