ನವದೆಹಲಿ: ಸಿಬಿಐ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ನಾಲ್ವರ ಗ್ಯಾಂಗ್ ಪಕ್ಷಕ್ಕೆ ಹಾನಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೇಲಸ ಮಾಡುತ್ತಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ.
ಮೋದಿಗೆ ಆಪ್ತರಾಗಿರುವ ನಾಲ್ವರ ಗ್ಯಾಂಗ್ ಪ್ರಧಾನಿ ವಿರುದ್ಧವೇ ಕೆಲಸ ಮಾಡುತ್ತಿದೆ. ಇದರಿಂದ ನಮ್ಮ ಪಕ್ಷಕ್ಕೆ ಹಾನಿಯಾಗುತ್ತಿದೆ. ನೀರವ್ ಮೋದಿ, ಮೆಹುವ್ ಚೋಕ್ಸಿ, ವಿಜಯ್ ಮಲ್ಯ ತಪ್ಪಿಸಿಕೊಂಡಿದ್ದಾರೆ. ಇದು ಹೀಗೆ ಮುಂದುವರೆದರೆ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹೇಗೆ? ನಾನು ಈಗಲೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ. ಅವರು ಒಳ್ಳೆಯವರು. ಆದರೆ ಅವರ ಆಪ್ತರೇ ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾಮಿ ಹೇಳಿದ್ದಾರೆ.
ಕಳೆದ ಮಂಗಳವಾರ ಅಲೋಕ್ ವರ್ಮಾ ಅವರ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸ್ವಾಮಿ, ಸಿಬಿಐ ನಿರ್ದೇಶಕರು ಉತ್ತಮ ಕೆಲಸ ಮಾಡುತ್ತಾರೆ ಎಂದಿದ್ದರು. ಇದೇ ವೇಳೆ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧ ಕಿಡಿ ಕಾರಿದ್ದರು.
ಅಲೋಕ್ ಕುಮಾರ್ ವಿರುದ್ಧ ತೆಗೆದುಕೊಂಡ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಮರು ಪರಿಶೀಲಿಸಬೇಕು ಎಂದು ತಾವು ಒತ್ತಾಯಿಸುವುದಾಗಿ ಸ್ವಾಮಿ ತಿಳಿಸಿದ್ದಾರೆ.