ಲೋಕಾರ್ಪಣೆಗೆ ಸಿದ್ಧವಾಗಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ
ಅಹ್ಮದಾಬಾದ್: ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಸ್ಟ್ಯಾಚ್ಯೂ ಆಫ್ ಯೂನಿಟಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಡೀ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಪ್ರಧಾನಿ ಮೋದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಈ ಹಿಂದೆ ಇದೇ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಬುಡುಕಟ್ಟು ಜನಾಂಗ ಮತ್ತು ಸುಮಾರು 75 ಸಾವಿರ ಅರಣ್ಯ ನಿವಾಸಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಎಚ್ಚರಿಕೆ ನೀಡಿದ್ದರು. ಇದೀಗ ಇದೇ ವಿಚಾರವಾಗಿ ಗ್ರಾಮಸ್ಥರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಅಮಾಯಕರ ಶವದ ಮೇಲೆ ವಿಶ್ವದ ಬೃಹತ್ ವಿಗ್ರಹ ಸ್ಥಾಪನೆಯಾಗಿದೆ, ಇಲ್ಲಿನ ವಿಧ್ವಂಸ ನೋಡಿದರೆ ಸರ್ದಾರ್ ಪಟೇಲರೂ ಕೂಡ ಕಣ್ಣೀರು ಹಾಕುತ್ತಾರೆ ಎಂದು ತಮ್ಮ ನೋವು ತೋಡಿಕೊಂಡಿದ್ಜಾರೆ.
ಸರ್ದಾರ್ ವಲ್ಲಭ ಭಾಯ್ ಪಟೇಲರ ವಿಗ್ರಹ ಸ್ಥಾಪನೆಯಾಗಿರುವ ಸರ್ದಾರ್ ಸರೋವರ ಡ್ಯಾಂ ನ ಸುತ್ತಮುತ್ತಲಿನ ಸುಮಾರು 22 ಗ್ರಾಮಗಳ ಮುಖ್ಯಸ್ಥರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ವಿಗ್ರಹ ನಿರ್ಮಾಣ ಯೋಜನೆಯಿಂದಾಗಿ ತಮಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ನಾಳಿನ ಉದ್ಘಾಟನಾ ಸಮಾರಂಭಕ್ಕೆ ನಾವು ಯಾರೂ ಬರುವಿದಲ್ಲ. ನಿಮಗೆ ಸ್ವಾಗತವನ್ನೂ ಕೂಡ ಕೋರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
'ನಿಮ್ಮ ಈ ಯೋಜನೆಯಿಂದಾಗಿ ಇಲ್ಲಿನ ನೈಸರ್ಗಿಕ ಪರಿಸರ ಸಂಪೂರ್ಣ ಹಾಳಾಗಿದ್ದು, ಅಪರೂಪದ ತಳಿಯ ಕೀಟ, ಪಕ್ಷಿ ಪ್ರಾಣಿ ಪ್ರಬೇಧಗಳು ನಶಿಸಿ ಹೋಗಿವೆ. ಇಲ್ಲಿನ ಅರಣ್ಯ. ನದಿಗಳು, ಜಲಪಾತಗಳು, ಭೂಮಿ ಮತ್ತು ಕೃಷಿ ಭೂಮಿಗಳೇ ನಮಗೆ ಜವನಾಡಿಗಳಾಗಿದ್ದವು. ತಲೆತಲಾಂತರಗಳಿಂದಲೂ ನಾವು ಇವುಗಳನ್ನೇ ನಂಬಿಕೊಂಡು ಇಲ್ಲಿ ವಾಸವಾಗಿದ್ದೆವು. ಇದೀಗ ನಮ್ಮ ಮೂಲಕ್ಕೇ ನೀವು ಕೊಡಲಿ ಪೆಟ್ಟು ನೀಡಿದ್ದು, ನಮ್ಮಂತಹ ನೂರಾರು ಅಮಾಯಕರ ಸಾವಿನ ಸಮಾಧಿ ಮೇಲೆ ನಿಮ್ಮ ಸ್ಟ್ಯಾಚ್ಯೂ ಆಫ್ ಯೂನಿಟಿ ನಿಂತಿದೆ. ಬಹುಶಃ ಸರ್ದಾರ್ ವಲ್ಲಭ ಭಾಯ್ ಪಟೇಲರೂ ಕೂಡ ಇಲ್ಲಿ ಅಗಿರುವ ವಿಧ್ವಂಸವನ್ನು ನೋಡಿದರೆ ಖಂಡಿತಾ ಕಣ್ಣೀರು ಹಾಕುತ್ತಾರೆ ಎಂದು ಗ್ರಾಮಸ್ಥರು ಪತ್ರದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ನಾಳೆ ಸರ್ದಾರ್ ವಲ್ಲಭ ಭಾಯ್ ಅವರ ಬೃಹತ್ ಪ್ರತಿಮೆ ಉದ್ಘಾಟನೆಗೆ ಗುಜರಾತ್ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಉದ್ಘಾಟನೆ ಸಂದರ್ಭದಲ್ಲೇ ಬೃಹತ್ ಪ್ರತಿಭಟನೆ ನಡೆಸಲು ಇಲ್ಲಿನ ಸುಮಾರು 2 ಗ್ರಾಮಗಳ ನಿವಾಸಿಗಳು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos