ಅಹಮದಾಬಾದ್: ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲರ ಏಕತೆಯ ಪ್ರತಿಮೆಗಾಗಿ ಸ್ಥಳೀಯ ಬುಡಕಟ್ಟು ಸಮುದಾಯದ ಭೂಮಿಗಳನ್ನು ಪಡೆಯಲಾಗಿದ್ದು, ಅವರಿಗೆ ಪರಿಹಾರ ಧನ ಮತ್ತು ಬದಲಿ ಭೂಮಿ ನೀಡಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.
ಈಗಾಗಲೇ ಸರ್ದಾರ್ ವಲ್ಲಭಭಾಯ್ ಪಟೇಲರ ಏಕತೆಯ ಪ್ರತಿಮೆ ಉದ್ಘಾಟನೆಯಾಗಿದ್ದರೂ, ಸರ್ಕಾರದ ಸ್ಥಳೀಯ ಬುಡಕಟ್ಟು ಸಮುದಾಯಗಳ ವಿರೋಧ ಎದುರಿಸುತ್ತಿದೆ. ಪ್ರತಿಮೆ ಮತ್ತು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಇವರ ಮನೆ ಮತ್ತು ಕೃಷಿ ಭೂಮಿಯನ್ನು ಪಡೆದಿದ್ದು, ಇದಕ್ಕಾಗಿ ಇವರಿಗೆ ಸೂಕ್ತ ಪರಿಹಾರ ಮತ್ತು ಬದಲಿ ವ್ಯವಸ್ಥೆ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸ್ಥಳೀಯರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ನೂರಾರು ಅಮಾಯಕ ಶವಗಳ ಮೇಲೆ ಏಕತೆಯ ಪ್ರತಿಮೆ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ, ಪ್ರಧಾನಿ ಮೋದಿ ಸ್ವಾಗತಕ್ಕೆ ಆಗಮಿಲುವುದಿಲ್ಲ. ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತೇವೆ ಎಂದು ತಮ್ಮ ನೋವು ತೋಡಿಕೊಂಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚತ್ತ ಗುಜರಾತ್ ಸರ್ಕಾರ ಇದೀಗ ಹೇಳಿಕೆ ನೀಡಿದ್ದು, ಯೋಜನೆ ಸಂಬಂಧ ಸ್ಥಳೀಯರಿಂದ ಪಡೆಯಲಾಗಿದ್ದ ಭೂಮಿಗೆ ಬದಲಾಗಿ ಬೇರೆಡೆ ಭೂಮಿ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಸುಮಾರು 1200 ಏಕರೆ ಭೂಮಿಯನ್ನು ಮೀಸಲಿರಿಸಲಾಗಿದೆ. ಅಲ್ಲದೆ 185 ಕುಟುಂಬಗಳಿಗೂ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.