ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ನಾಳೆ ಅಧಿಕೃತವಾಗಿ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆ ಇದೆ.
ಕೆಸಿಆರ್ ಅವರು ಈ ಸಂಬಂಧ ನಾಳೆ ಮಧ್ಯಾಹ್ನ 1 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿದ್ದು, ಸಂಪುಟ ಸಭೆಯ ಬಳಿಕ ವಿಧಾನಸಭೆ ವಿಸರ್ಜಿಸುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ನಾಳೆ ರಂಗಾರೆಡ್ಡಿ ಜಿಲ್ಲೆಯಲ್ಲಿ ಸುಮಾರು 2 ಸವಾರಿ ಎಕರೆ ಪ್ರದೇಶದಲ್ಲಿ ಪ್ರಗತಿ ನಿವೇಧನಾ ಸಭಾ ಎಂಬ ಹೆಸರಿನ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.
ನಾಳೆ ನಮ್ಮ ಪಕ್ಷದ ನಾಯಕರು ಅತ್ಯಂತ ಮಹತ್ವದ ರಾಜಕೀಯ ನಿರ್ಧಾರ ಘೋಷಿಸಲಿದ್ದಾರೆ. ಪ್ರಗತಿ ನಿವೇಧನಾ ಸಭೆಯ ನಂತರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಳ್ಳಲಿದೆ ಎಂದು ಮುಖ್ಯಮಂತ್ರಿ ಕೆಸಿಆರ್ ಪುತ್ರ, ಟಿಆರ್ ಎಸ್ ನಾಯಕ ಹಾಗೂ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ ನಾಳೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರ ಮೇ 2019ಕ್ಕೆ ಅವಧಿ ಪೂರ್ಣಗೊಳಿಸಲಿದ್ದು, ಲೋಕಸಭೆ ಜೊತೆಗೆ ಚುನಾವಣೆ ನಡೆಯಬೇಕಿದೆ. ಆದರೆ ಲೋಕಸಭೆ ಚುನಾವಣೆ ಜೊತೆ ವಿಧಾನಸಭೆ ಚುನಾವಣೆ ಎದುರಿಸಿದರೆ ಟಿಆರ್ ಎಸ್ ಹಿನ್ನಡೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಸಿಆರ್ ಅವರು ಅವಧಿಗೂ ಮುನ್ನವೇ ವಿಧಾಸಭೆ ವಿಸರ್ಜಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.