ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ ಅವಧಿ ಪೂರ್ವ ಚುನಾವಣೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಹೊಸದಾಗಿ ರಾಜ್ಯ ರಚನೆಯಾದ ನಂತರ 2013ರಲ್ಲಿ ಲೋಕಸಭೆ ಜತೆಗೇ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆದಿತ್ತು. ತೆಲಂಗಾಣ ಮೊದಲ ವಿಧಾನಸಭೆಯ ಅವಧಿ 2019ರ ಏಪ್ರಿಲ್-ಮೇ ವರೆಗೆ ಇದೆಯಾದರೂ, ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದರ ಜತೆಗೇ ಚುನಾವಣೆ ಎದುರಿಸಲು ಕೆಸಿಆರ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೆಸಿಆರ್ ಇಂದು ಮಧ್ಯಾಹ್ನದ ಹೊತ್ತಿಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ವತಿಯಿಂದ ‘ಪ್ರಗತಿ ನಿವೇದನಾ ಸಭಾ’ ಎಂಬ ಸಮಾವೇಶ ಆಯೋಜನೆಗೊಂಡಿದ್ದು, ಅಲ್ಲಿ ಕೆಸಿಆರ್ ಅವರು ತಮ್ಮ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳಿವೆ. ಪ್ರಗತಿ ನಿವೇದನಾ ಸಭೆಗಾಗಿ ಈಗಾಗಲೇ ರಂಗಾ ರೆಡ್ಡಿ ಜಿಲ್ಲೆಯಲ್ಲಿ 2000 ಎಕರೆ ಪ್ರದೇಶವನ್ನು ಗುರುತಿಸಿ ಸಜ್ಜುಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ಸಚಿವ ಕೆ.ಟಿ ರಾಮಾರಾವ್ ಅವರು, 'ಮುಖ್ಯಮಂತ್ರಿ ಕೆಸಿಆರ್ ಅವರಿಂದ ಪ್ರಮುಖ ರಾಜಕೀಯ ತೀರ್ಮಾನವೊಂದನ್ನು ನೀವು ನಾಳೆ ನಿರೀಕ್ಷೆ ಮಾಡಬಹುದು. ನಾಳಿನ ಸಭೆಯ ನಂತರ ರಾಜ್ಯದ ರಾಜಕೀಯ ಕಾವೇರಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ವಿಧಾನಸಭೆಯನ್ನು ವಿಸರ್ಜಿಸುವ ಕುರಿತ ಪ್ರಶ್ನೆಗೆ ಅವರಿಂದ ಸೂಕ್ತ ಉತ್ತರ ಸಿಕ್ಕಿಲ್ಲ. ತೆಲಂಗಾಣ ರಾಜ್ಯ ರಚನೆಯಾಗಿ ಸೆಪ್ಟೆಂಬರ್ 2 ನಾಲ್ಕು ವರ್ಷಗಳು ಪೂರೈಸಲಿವೆ. ಈ ದಿನದಂದು ಪ್ರಗತಿ ನಿವೇದನಾ ಸಮಾವೇಶ ಆಯೋಜಿಸಿರುವ ಕೆಸಿಆರ್, ಅಲ್ಲಿ ತಮ್ಮ ನಾಲ್ಕು ವರ್ಷಗಳ ಸಾಧನೆಯನ್ನು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ, ಸಮಾವೇಶದ ಮೂಲಕವೇ ಚುನಾವಣೆಗೆ ರಣಕಹಳೆ ಮೊಳಗಿಸಲು ಅವರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.