ತಿರುವನಂತಪುರ: ರುದ್ರ ಜಲಪ್ರಳಯಕ್ಕೆ ನಲುಗಿರುವ ಕೇರಳದ ಮರು ನಿರ್ಮಾಣಕ್ಕೆ ಸಂಪನ್ಮೂಲ ಹೊಂದಿಸುವ ಸಲುವಾಗಿ ದೇಣಿಗೆ ಸಂಗ್ರಹಕ್ಕೆ ರಾಜ್ಯ ಸರ್ಕಾರ ಸಚಿವರು ಮತ್ತು ಅಧಿಕಾರಿಗಳ ತಂಡವನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯ ನಾಯಕರು ವಾಗ್ದಾಳಿ ನಡೆಸಿದ್ದಾರೆ. ದೇಣಿಗೆ ಸಂಗ್ರಹಕ್ಕೆ ಸಚಿವರನ್ನು ನಿಯೋಜಿಸುತ್ತಿರುವುದನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದ್ದಾರೆ.
ವಿದೇಶಗಳಲ್ಲಿ ಕೇರಳಿಗರು ಆತ್ಮಾಭಿಮಾನದಿಂದ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ವಿದೇಶಗಳಿಗೆ ಹೋಗಿ ಬೇಡುವ ಮೂಲಕ ಭಾರತೀಯರಿಗೆ ಅವಮಾನ ಮಾಡಬಾರದು ಎಂದು ಕಾಂಗ್ರೆಸ್ ಪಕ್ಷದ ನಾಯಕರಾದ ಕೆವಿ ಥಾಮಸ್ ಒತ್ತಾಯಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಉಮ್ಮನ್ ಚಾಂಡಿ ಸಹ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದು ವಿದೇಶ ಪ್ರವಾಸ ಮಾಡುವ ಕಾಲವಲ್ಲ. ಭೀಕರ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ಮೂಲಸೌಕರ್ಯ ಪುನರ್ ನಿರ್ಮಿಸಲು ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಸಚಿವರುಗಳಿಗೆ ಜಿಲ್ಲೆಗಳ ಹೊಣೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.