ತಿರುವನಂತಪುರಂ: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದ್ದು, ನೀರಿನಿಂದ ಹಬ್ಬಿದ ವಿಚಿತ್ರ ರೋಗದಿಂದಾಗಿ ಈ ವರೆಗೂ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ 5 ದಿನಗಳ ಅವಧಿಯಲ್ಲಿ ಅಂದರೆ ಆಗಸ್ಟ್ 29ರಿಂದ ಈ ವರೆಗೂ ಕೇರಳದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಸಾವಿಗೆ ನೀರಿನಿಂದ ಹಬ್ಬಿದ ಸಾಂಕ್ರಾಮಿಕ ರೋಗವೇ ಕಾರಣ ಎಂದು ವೈದ್ಯರು ಶಂಕಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳದಲ್ಲಿ ಪ್ರವಾಹದ ಬಳಿಕ ಸಾಂಕ್ರಾಮಿಕ ರೋಗಗಳ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಗ್ರಾಮಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ, ಶುದ್ಧ ನೀರನ್ನು ಮಾತ್ರ ಕುಡಿಯುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಅಲ್ಲದೆ ತುರ್ತು ಸಂದರ್ಭಗಳಿಗೆ ಸಿದ್ಧರಾಗಿರುವಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಸರ್ವ ಸನ್ನದ್ಧ ರೀತಿಯಲ್ಲಿ ತಯಾರಿಗಿರುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಕೆಲ ವೈದ್ಯರು ಅಭಿಪ್ರಾಯ ಪಟ್ಟಿರುವಂತೆ ಪ್ರಸ್ತುತ ಕೇರಳವನ್ನು ಆವರಿಸಿರುವ ಶಂಕಿತ ಜ್ವರವನ್ನು ಲೆಪ್ಟೊಸ್ಪೈರೋಸಿಸ್ (ಇಲಿ ಜ್ವರ) (ನಾಯಿ, ಬೆಕ್ಕು ಸೇರಿದಂತೆ ಮತ್ತಿತರ ಸಸ್ತನಿಗಳಿಗೆ ಬರುವ ಮತ್ತು ಮನುಷ್ಯರಿಗೂ ಹರಡಬಹುದಾದ ಒಂದು ಅಂಟುರೋಗ) ಎಂದು ಶಂಕಿಸಲಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯನ್ವಯ ಈ ಶಂಕಿತ ಜ್ವರಕ್ಕೆ ಈಗಾಗಲೇ 10 ಮಂದಿ ಬಲಿಯಾಗಿದ್ದು, ಕೇರಳದಲ್ಲಿ ಸುಮಾರು 350 ಮಂದಿಯಲ್ಲಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಪೈಕಿ 150 ರಕ್ತದ ಮಾದರಿಯಲ್ಲಿ ಜ್ವರ ಪತ್ತೆಯಾಗಿದ್ದು, ಕಲ್ಲಿಕೋಟೆ ಮತ್ತು ಮಳಪ್ಪುರಂನಲ್ಲಿ ಶಂಕಿತ ಜ್ವರದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.