ದೇಶ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ: ಜಗಳ ಬಿಡಿಸಲು ಬಂದ ವ್ಯಕ್ತಿಯನ್ನೇ ಇರಿದು ಕೊಂದ ಪಾಪಿ

Manjula VN
ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ಏರ್ಪಟ್ಟಿದ್ದು, ಈ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ವ್ಯಕ್ತಿಯನ್ನೇ ಇರಿದು ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. 
ಲೊನಿಯ ನಿವಾಸಿಯಾಗಿರುವ ವಸೀಂ ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ. ಹತ್ಯೆ ಮಾಡಿದವರ ಕುರಿತು ಈವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 
ತನ್ನ ಸಂಬಂಧಿಕ ಹಾಗೂ ಸಹೋದರನೊಂದಿಗೆ ವಸೀಂ ಆಟೋದಲ್ಲಿ ಹೋಗುತ್ತಿದ್ದ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಈ ವೇಳೆ ಸಹಾಯ ಕೇಳಿದ್ದಾರೆ. ಏನಾಯಿತು ಎಂದು ತಿಳಿಯುವ ಸಲುವಾಗಿ ವಸೀಂ ಆಟೋ ನಿಲ್ಲಿಸಿ ವಿಚಾರಿಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ವರುಣ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕಾರಣಕ್ಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಜಗಳವಾಗುತ್ತಿರುವುದು ತಿಳಿದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ವಸೀಂ ಜಗಳ ಬಿಡಿಸಲು ಮುಂದಾಗಿದ್ದಾರೆ. ಇದರಿಂದ ಉದ್ರಿಕ್ತನಾದ ವ್ಯಕ್ತಿಯೊಬ್ಬ ವಸೀಂನನ್ನೇ ಇರಿದು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. 
ಇರಿತಕ್ಕೊಳಗಾದ ವಸೀಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. 
SCROLL FOR NEXT