ದೇಶ

ಹರ್ಯಾಣ ಗ್ಯಾಂಗ್ ರೇಪ್: ಮಾಡೋದೆಲ್ಲಾ ಮಾಡಿ ಯುವತಿಯ ಸ್ಥಿತಿ ಬಗ್ಗೆ ಭಯಗೊಂಡು ವೈದ್ಯರಿಗೆ ಕರೆ ಮಾಡಿದ್ದ ಆರೋಪಿಗಳು!

Srinivas Rao BV
ರೆವಾರಿ: ಹರ್ಯಾಣದಲ್ಲಿ 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗಳು ಆಕೆಯ ಆರೋಗ್ಯದ ಸ್ಥಿತಿ ಕಂಡು ಆತಂಕಕ್ಕೊಳಗಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ. 
ಅತ್ಯಾಚಾರವೆಸಗಿದ ಬಳಿಕ ಆಕೆಯ ಸ್ಥಿತಿಯನ್ನು ಕಂಡ ಆರೋಪಿಗಳು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದ್ದಾರೆ. ಅತಿಯಾದ ಪ್ರಮಾಣದಲ್ಲಿ ಮತ್ತು ಬರುವ ವಸ್ತುವನ್ನು ಸೇವಿಸಿದ್ದರಿಂದ ಹಾಗೂ ಸತತ 8 ಗಂಟೆಗಳ ಕಾಲ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದರಿಂದ ಆಕೆಯ ಆರೋಗ್ಯ ಚಿಂತಾಜನಕವಾಗಿತ್ತು. 
ಎಫ್ಐಆರ್ ನಲ್ಲಿ ಕೇವಲ ಮೂವರ ಹೆಸರು ದಾಖಲಾಗಿದೆಯಾದರೂ ಯುವತಿಯ ಮೇಲೆ 12 ಜನ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.  ಆರೋಪಿಗಳು ಯುವತಿಯ ಆರೋಗ್ಯದ ಬಗ್ಗೆ ಆತಂಕಕ್ಕೊಳಗಾಗಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗಿದ್ದರಿಂದ ಆಕೆ ಸಾವನ್ನಪ್ಪಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಆರೋಪಿಗಳು ಆಕೆಯನ್ನು ಅವರಿದ್ದ ಸ್ಥಳದಿಂದ 40 ಕಿಮೀ ದೂರದಲ್ಲಿದ್ದ ಮಹೇಂದ್ರಘಢ ಬಸ್ ನಿಲ್ದಾಣದ ಬಳಿ ಕರೆದೊಯ್ದು ಬಿಟ್ಟಿದ್ದಾರೆ  ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮೂಲಕ ತಿಳಿದುಬಂದಿದೆ. 
ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟ ನಂತರ, ಎಫ್ಐಆರ್ ನಲ್ಲಿ ದಾಖಲಿಸಿರುವ ಮನೀಶ್ ಎಂಬಾತ ಯುವತಿಯ ತಂದೆಗೆ ಕರೆ ಮಾಡಿ ಅರೆ ಪ್ರಜ್ಞೆಯಲ್ಲಿರುವುದನ್ನು ತಿಳಿಸಿದ್ದಾನೆ. ಪಂಕಜ್, ಸೇನಾ ಯೋಧ, ನಿಶು, ಮನೀಶ್ ಎಲ್ಲರೂ ರೆವಾರಿ ಗ್ರಾಮದವರೇ ಆಗಿದ್ದು, ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಆಕೆಯ ಕುಟುಂಬ ಸದಸ್ಯರ ಪರಿಚಯ ಹೊಂದಿದ್ದಾರೆ. ಪ್ರಕರಣದಲ್ಲಿ ವೈದ್ಯರ ಹೇಳಿಕೆ ಮುಖ್ಯವಾಗಿದ್ದು, ಪೊಲೀಸರು ವೈದ್ಯರಿಗೆ ಭದ್ರತೆ ಒದಗಿಸಿದ್ದಾರೆ.
SCROLL FOR NEXT