ನವದೆಹಲಿ: ಇತ್ತೀಚಿಗಷ್ಟೇ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಯುದ್ಧ ವಿಮಾನ ನಿರ್ಮಿಸುವ ಸಾಮರ್ಥ್ಯ ಹೊಂದಿಲ್ಲ ಎಂದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗ ರಾಫೆಲ್ ಡೀಲ್ ನಿಂದ ಎಚ್ಎಎಲ್ ಅನ್ನು ಕೈಬಿಟ್ಟಿದ್ದು ಯುಪಿಎ ಸರ್ಕಾರವೇ ಎಂದು ಮಂಗಳವಾರ ಆರೋಪಿಸಿದ್ದಾರೆ.
ರಕ್ಷಣಾ ಸಚಿವರು ಎಚ್ಎಎಲ್ ಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್ ಅವರು, ರಾಫೆಲ್ ಡೀಲ್ ನಿಂದ ಎಚ್ಎಎಲ್ ಅನ್ನು ಹೊರಗಿಟ್ಟಿದ್ದೇ ಯುಪಿಎ ಸರ್ಕಾರ. ಹೀಗಾಗಿ ನಂತರವೂ ಅದನ್ನು ಹೊರಗಿಡಬೇಕಾಯಿತು ಎಂದು ಹೇಳಿದ್ದಾರೆ.
ಡಸಾಲ್ಟ್ ಏವಿಯೇಷನ್ ಸಂಸ್ಥೆ ಜತೆಗಿನ ಒಪ್ಪಂದದಿಂದ ಎಚ್ಎಎಲ್ ಅನ್ನು ಹೊರಗಿಡುವ ನಿರ್ಧಾರವನ್ನು ಎನ್ಡಿಎ ಸರ್ಕಾರ ಕೈಗೊಂಡಿಲ್ಲ. ಈ ನಿರ್ಧಾರವನ್ನು ಕೈಗೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಂದು ಸಚಿವರು ತಿಳಿಸಿದರು.
ಎಚ್ಎಎಲ್ ಮತ್ತು ಡಸಾಲ್ಟ್ ಏವಿಯೇಷನ್ ಯುದ್ಧ ವಿಮಾನ ನಿರ್ಮಾಣ ಷರತ್ತುಗಳಿಗೆ ಒಪ್ಪಲಿಲ್ಲ ಮತ್ತು ಎರಡು ಒಟ್ಟಿಗೆ ಕೆಲಸ ಮಾಡಲು ಸಿದ್ಧವಿರಲಿಲ್ಲ. ಹೀಗಾಗಿ ಒಪ್ಪಂದ ರದ್ದಾಯಿತು ಎಂದು ಸೀತಾರಾಮನ್ ಹೇಳಿದ್ದಾರೆ.
2013ರಲ್ಲಿ ವೆಚ್ಚ ಸಮಾಲೋಚನಾ ಸಮಿತಿಯು ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡುತ್ತಿರುವಾಗ ಅಂದಿನ ರಕ್ಷಣಾ ಸಚಿವ ಎ. ಕೆ. ಆಂಟನಿ ಅವರ ಅತಿಯಾದ ಹಸ್ತಕ್ಷೇಪವೂ ಎಚ್ ಎಎಲ್ ಜೊತೆಗಿನ ಒಪ್ಪಂದ ರದ್ದಾಗಲು ಕಾರಣ ಎಂದು ಈ ಹಿಂದೆ ಸೀತಾರಾಮನ್ ಆರೋಪಿಸಿದ್ದರು. ಸೀತಾರಾಮನ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಆಂಟನಿ, ರಕ್ಷಣಾ ಸಚಿವರು ಸತ್ಯ ಮರೆಮಾಚುತ್ತಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos