ದೇಶ

ಮರ್ಯಾದಾ ಹತ್ಯೆ ಯತ್ನ: ಯುವತಿ ತಂದೆಯಿಂದ ನವಜೋಡಿ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

Raghavendra Adiga
ಹೈದರಾಬಾದ್: ತಮ್ಮ ಕುಟುಂಬದ ಮರ್ಯಾದೆ ಕಾಪಾಡಿಕೊಳ್ಳುವದಕ್ಕಾಗಿ ತಂದೆಯೊಬ್ಬರು ತನ್ನ ಮಗಳು ಹಾಗೂ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಾಡು ಹಗಲೇ ಹಲ್ಲೆ ನಡೆಸಿರುವ ಭೀಕರ ಘಟನೆ ಹೈದರಾಬಾದ್ ನಲ್ಲಿ  ನಡೆದಿದೆ.
ತೆಲಂಗಾಣದ ಎರ್ರಂಗಡದಲ್ಲಿನ ಎಸ್.ಆರ್. ನಗರ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ನವಜೋಡಿಯಾಗಿರುವ ಮಾಧವಿ ಹಾಗೂ ಆಕೆಯ ಪತಿ ಸಂದೀಪ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಎದುರಿನಿಂದ ಇನ್ನೊಂದು ಬೈಕ್ ನಲ್ಲಿ ಬಂದ ಮಾಧವಿಯ ತಂದೆ ನರಸಿಂಹಾಚಾರಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿದ್ದಾರೆ. ಆಗ ಬೈಕ್ ನಿಂದ ಇಳಿದ ನರಸಿಂಹಾಚಾರಿ ತಮ್ಮ ಬ್ಯಾಗ್ ನಿಂದ ಮಾರಕಾಸ್ತ್ರವನ್ನು ಹೊರತೆಗೆದು ಏಕಾ ಏಕಿಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಸಧ್ಯ ಹಲ್ಲೆಗೊಳಗಾದ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೋಲೀಸರು ಹೇಳೀದ್ದಾರೆ.
ದಾಳಿ ಮಾಡಿದ ನರಸಿಂಹಾಚಾರಿ ತಲೆ ತಪ್ಪಿಸಿಕೊಂಡಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ:
ಹತ್ತು ದಿನಗಳ ಹಿಂದೆ ಆರ್ಯ ಸಮಾಜದ ಬೌವೆನ್ ಪಲ್ಲಿ ಶಾಖೆಯಲ್ಲಿ ಸಂದೀಪ್-ಮಾಧವಿ ವಿವಾಹವಾಗಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಆದ ಮದುವೆ ಇದಾಗಿತ್ತು.ಈ ಮದುವೆ ಕುರಿತು ಇದಾಗಲೇ ಸಂದೀಪ್ ತನ್ನ ಕುಟುಂಬದ ಅನುಮತಿ ಪಡೆದಿದ್ದರೂ ಯುವತಿಯ ಮನೆಯವರಲ್ಲಿ ಪ್ರಬಲ ವಿರೋಧವಿತ್ತು.
ತಮ್ಮ ಜೀವಕ್ಕೆ ಅಪಾಯವಿದೆ ಎಂದು ಯುವ ಜೋಡಿಯು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರನ್ನು ಸಹ ಸಲ್ಲಿಸಿದ್ದರು.ಈ ಕುರಿತು ಕಳೆದ ಒಂದು ವಾರ ಪೋಲೀಸರು ಎರಡು ಕುಟುಂಬಗಳಲ್ಲಿ ರಾಜಿ ಮಾಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಕಳೆದ ಆರು ವರ್ಷಗಳಿಂದ ಸಂದೀಪ್ ಹಾಗೂ ಮಾಧವಿ ಪರಸ್ಪರ ಪರಿಚಯ ಹೊಂದಿದ್ದರು ಅವರು ಮದುವೆಯಾದ  ಬಳಿಕ ಸಂದೀಪ್ ಮನೆಯಿದ್ದ ಬೋರ್ಬಂದದಲ್ಲಿನ ಪ್ರೇಮ್ ನಗರ್ ನಲ್ಲಿ ವಾಸವಾಗಿದ್ದರು.ಸೆಪ್ಟೆಂಬರ್ 16 ರಂದು ಸಹ ಎರಡೂ ಕುಟುಂಬಗಳು ರಾಜಿ ಸಂಧಾನ ಸಭೆಯಲ್ಲಿ ಬಾಗವಹಿಸಿದ್ದವೆಂದು ಸಂದೀಪ್ ಸಂಬಂಧಿಯೊಬ್ಬರು ಹೇಳಿದ್ದಾರೆ. ಆದರೆ ಸಂದೀಪ್ ಹಾಗೂ ಮಾಧವಿ ತಾವು ಬೇರಾಗುವುದಿಲ್ಲ ಎಂದು ಪಟ್ಟು ಹಿಡಿದಾಗ ಅವಾಚ್ಯ ಶಬ್ದಗಳ ಪ್ರಯೋಗ, ಪರಸ್ಪರ ವಾಕ್ಸಮರದೊಡನೆ ಈ ರಾಜಿ ಸಭೆ ಅಂತ್ಯವಾಗಿತ್ತು.ಇದಾದ ಮರುದಿನ ಮಾಧವಿ ತಂದೆ ಮದ್ಯ ಸೇವಿಸಿ ಸಂದೀಪ್ ಮನೆಗೆ ಬಂದಿದ್ದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇಷ್ಟಾಗಿ ಸಂದೀಪ್ ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT