ನವದೆಹಲಿ: ರಾಮನನ್ನು ಮರೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲರಾಗಿದೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಗುರುವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಅ.21 ರಂದು ಲಖನೌನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆಗೆ ತೊಗಾಡಿಯಾ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಸತ್ತು ಕಾಯ್ದೆ ಮೂಲಕ ರಾಮ ಮಂದಿನವನ್ನು ನಿರ್ಮಾಣ ಮಾಡಲಾಗುತ್ತದೆ, ಕೈಗೆಟುವ ದರದಲ್ಲಿ ಎಲ್ಲರಿಗೂ ಶಿಕ್ಷಣ ಹಾಗೂ ಕೋಟ್ಯಾಂತರ ಯುವಕರಿಗೆ ಉದ್ಯೋಗ ಒದಗಿಸಿಕೊಡಲಾಗುತ್ತದೆ, ಪೆಟ್ರೋಲ್ ಬೆಲೆ ಅಗ್ಗವಾಗುತ್ತದೆ, ರೈತರ ಸಾಲ ಮನ್ನಾ ಆಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಮೋದಿ ಸರ್ಕಾರ ನಮ್ಮೆಲ್ಲಾ ನಿರೀಕ್ಷೆಗಳನ್ನೂ ಹುಸಿಯಾಗಿಸಿದೆ. ಇದೀಗ ರಾಮನನ್ನೇ ಮರೆತಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಕುರಿತಂತೆ ಮುಸ್ಲಿಂ ಮಹಿಳೆಯರ ಪರ ವಕೀಲರಾಗಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅ.21 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ನಾವೂ ಕೂಡ ಭಾಗಿಯಾಗುತ್ತೇವೆ. ಮಲಗಿರುವ ಸರ್ಕಾರವನ್ನು ಎದ್ದೇಳುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.