ನವದೆಹಲಿ: ಪಾಕಿಸ್ತಾನದೊಂದಿಗಿನ ಉದ್ದೇಶಿತ ಮಾತುಕತೆಯನ್ನು ರದ್ದುಗೊಳಿಸುವ ಮೂಲಕ ಭಾರತ ಸರ್ಕಾರ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ ಎಂದು ಕಾರ್ಗಿಲ್ ಹೀರೋ ಹುತಾತ್ಮ ಯೋಧ ಸೌರಭ್ ಕಾಲಿಯಾ ತಂದೆ ಎನ್ ಕೆ ಕಾಲಿಯಾ ಹೇಳಿದ್ದಾರೆ.
ಉಗ್ರರು ಕಾಶ್ಮೀರ ಪೊಲೀಸರ ಅಹಪರಣ ಮಾಡಿ ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರೋಧದ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆಯಲ್ಲಿ ನಡೆಯಬೇಕಿದ್ದ ಇಂಡೋ-ಪಾಕ್ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿತ್ತು. ಇದೀಗ ಭಾರತ ಸರ್ಕಾರದ ನಿರ್ಧಾರಕ್ಕೆ ಸೌರಭ್ ಕಾಲಿಯಾ ತಂದೆ ಎನ್ ಕೆ ಕಾಲಿಯಾ ಬೆಂಬಲ ವ್ಕಕ್ತಪಡಿಸಿದ್ದು, ಭಾರತ ಸರ್ಕಾರದ ನಿರ್ಧಾರ ಉತ್ತಮವಾದದ್ದು. ಪಾಕಿಸ್ತಾನ ಮೊದಲು ತನ್ನ ನಡೆತಯನ್ನು ಬದಲಿಸಿಕೊಳ್ಳಬೇಕು. ಉಗ್ರರೊಂದಿಗೆ ಮೃದುಧೋರಣೆಯನ್ನು ಪಕ್ಕಕ್ಕಿಟ್ಟು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎನ್ ಕೆ ಕಾಲಿಯಾ ಅವರು, ಈಗಲೂ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ತಮಗೆ ಭಯವಿದ್ದು, ಒಂದೆಡೆ ಶಾಂತಿ ಮಾತುಕತೆಗೆ ಆಹ್ವಾನಿಸುವ ಪಾಕಿಸ್ತಾನ ಮತ್ತೊಂದು ಕಡೆ ಭದ್ರತಾ ಪಡೆಗಳ ಮೇಲೆ ತನ್ನ ಕ್ರೂರ ಕುಕೃತ್ಯವನ್ನು ಮುಂದುವರೆಸುತ್ತದೆ. ಭವಿಷ್ಯದಲ್ಲೂ ಕೂಡ ಇದು ಹೀಗೇ ಸಾಗಲಿದೆ. ಪಾಕಿಸ್ತಾನ ಸರ್ಕಾರ ತನ್ನ ಮೃಧು ಧೋರಣೆಯನ್ನು ಕೈ ಬಿಡದ ಹೊರತು ಇದು ಪರಿಹಾರವಾಗುವ ಸಾಧ್ಯತೆಯೇ ಇಲ್ಲ. ಇದರ ಹೊರತಾಗಿಯೂ ಶಾಂತಿಮಾತುಕತೆ ಎಂಬುದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಸಮಯ ವ್ಯರ್ಥವೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ. ದೇಶವನ್ನು ಪ್ರೀತಿಸುವ ಯಾವುದೇ ವ್ಯಕ್ತಿ ಭಾರತ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತಾನೆ ಎಂದು ಪರೋಕ್ಷವಾಗಿ ಕಾಲಿಯಾ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ಶುಕ್ರವಾರವಷ್ಟೇ ವಿಶ್ವಸಂಸ್ಥೆ ಸಭೆಯಲ್ಲಿ ಇಂಡೋ-ಪಾಕ್ ವಿದೇಶಾಂಗ ಸಚಿವರ ಸಭೆಗೆ ಸಮ್ಮತಿ ನೀಡಿದ್ದ ಭಾರತ ಸರ್ಕಾರ ಕಾಶ್ಮೀರ ಪೊಲೀಸರ ಅಪಹರಣ ಮತ್ತು ಹತ್ಯೆ ಬೆನ್ನಲ್ಲೇ ತನ್ನ ಪ್ರತಿಭಟನೆಯಾರ್ಥವಾಗಿ ಸಭೆಯನ್ನು ರದ್ದುಗೊಳಿಸಿತ್ತು. ಇದಕ್ಕೂ ಮುನ್ನ ಕಳೆದ ಸೆಪ್ಟೆಂಬರ್ 18ರಂದು ಬಿಎಸ್ ಎಫ್ ಮುಖ್ಯಪೇದೆ ನರೇಂದ್ರ ಸಿಂಗ್ ಅವರ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿದ್ದ ಉಗ್ರರು ಸರ್ಕಾರಿ ಉದ್ಯೋಗ ತ್ಯಜಿಸದಿದ್ದರೆ ಕೊಂದು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಾಲ್ಕು ಮಂದಿ ಪೊಲೀಸರನ್ನು ಅಪಹರಣ ಮಾಡಿದ್ದ ಉಗ್ರರು ಈ ಪೈಕಿ ಮೂವರನ್ನು ಕೊಂದು ಹಾಕಿದ್ದರು. ಓರ್ವ ಅಧಿಕಾರಿ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದರು. ಈ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos