ದೇಶ

ಹಿಮಾಚಲದಲ್ಲಿ ಭೀಕರ ಮಳೆ: 249 ರಕ್ಷಣೆ, ಸಂಕಷ್ಟದಲ್ಲಿ ಇನ್ನೂ 500 ಮಂದಿ, ರೂ.1230 ಕೋಟಿ ನಷ್ಟ

Manjula VN
ಚಂಡೀಗಢ: ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಮಳೆ ಇದೀಗ ಹಿಮಾಚಲಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. 
ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಅಬ್ಬರಿಸುತ್ತಿದ್ದು, ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಮಳೆ ಅವಾಂತರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 249ಕ್ಕೂ ಹೆಚ್ಚು ಮಂದಿಯನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿದ್ದಾರೆ. ಈಗಲೂ 500 ಮಂದಿ ಸಂಕಷ್ಟದಲ್ಲಿರುವುದಾಗಿ ಹೇಳಲಾಗುತ್ತಿದೆ. 
ಮಳೆಯಿಂದಾಗಿ ಪ್ರವಾಸಿಗರ ಸ್ವರ್ಗ ಮನಾಲಿಯ ಸಂಪರ್ಕ ಕಡಿತಗೊಂಡಿದೆ. ಪ್ರವಾಸಿ ಬಸ್, ಲಾರಿಗಳು ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯಲ್ಲ ಕೊಚ್ಚಿ ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಬಸ್ ನಲ್ಲಿ ಪ್ರಯಾಣಿಕರು ಇಲ್ಲದಿದ್ದ ಕಾರಣ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. 
ರಕ್ಷಣೆಗೊಂಡಿರುವ ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಹಾರ ಕಾರ್ಯಗಳು ಮುಂದುವರೆದಿವೆ. 
ಈ ನಡುವೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು, ಕೊಕ್ಸರ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಬರಲಚದಲ್ಲಿ 300 ಮಂದಿ ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಆಹಾರ ಹಾಗೂ ಔಷಧಿಗಳನ್ನು ಒದಗಿಸಲಾಗುತ್ತಿದೆ. ಜನರು ಭೀತಿಗೊಳಗಾಗಬಾರದು ಎಂದು ಹೇಳಿದ್ದಾರೆ.
ಜನರ ರಕ್ಷಣೆ 2 ಐಎಎಫ್ ಹೆಲಿಕಾಪ್ಟರ್ ಗಳು ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಭರ್ಮೊರ್ ನಲ್ಲಿ 1,200 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಪ್ರವಾಹದಿಂದಾಗಿ ಈ ವರೆಗೂ ರಾಜ್ಯಕ್ಕೆ ರೂ.1,230 ಕೋಟಿ ನಷ್ಟವಾಗಿದೆ. ಕಆರ್ಥಿಕ ನೆರವು ನೀಡುವಂತೆ ಕೇಂದ್ರದ ಬಳಿ ರೂ.200 ಕೋಟಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 
ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ರೂ.230 ಕೋಟಿ ಬಿಡುಗಡೆ ಮಾಡಿದೆ. ಕುಲ್ಲು ಜಿಲ್ಲೆಗಾಗಿ ರೂ.30 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. 
SCROLL FOR NEXT