ಇಂಧೋರ್(ಮಧ್ಯಪ್ರದೇಶ): ಅಜ್ಜನೊಬ್ಬ ಕಳೆದ ಕೆಲ ವರ್ಷಗಳಿಂದ ತನ್ನ ಮಗನ ಹೆಸರಿನಲ್ಲಿ ವರ್ಷಕ್ಕೆ 60 ಕೆಜಿ ಪಡಿತರ ದವಸ ಧಾನ್ಯ ಗಳನ್ನು ಕೊಂಡೊಯ್ಯುತ್ತಿದ್ದರು. ಆದರೆ ಒಮ್ಮೆ ಪಿಡಿಎಸ್ ಅಧಿಕಾರಿಗಳು ಮನೆಗೆ ತೆರಳಿ ಆ "ಮಗ" ಯಾರೆಂದು ತಿಳಿದಾಗ ಅವರು ಬೆಚ್ಚಿ ಬಿದ್ದಿದ್ದಾರೆ. "ರಾಜು" ಎನ್ನುವ ಮಗ ಮನುಷ್ಯನಾಗಿರದೆ ಆ ಮನೆಯ "ಸಾಕು ನಾಯಿ" ಆಗಿತ್ತು!
ನರಸಿಂಗ್ ಬೋದಾರ್ (75) ಎನ್ನುವ ವ್ಯಕ್ತಿ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿ ಈತ ತನ್ನ ಮಗ ರಾಜುವಿನ ಹೆಸರಲ್ಲಿ ಕಳೆದ ಕೆಲ ವರ್ಷಗಳಿಂದಲೂ ಅಕ್ಕಿ, ಗೋಧಿ ಸೇರಿ ಅನೇಕ ಪಡಿತರ ಸಾಮಗ್ರಿಯನ್ನು ಖರೀದಿಸುತ್ತಿದ್ದ. ಆದರೆ ಆಧಾರ್ ಆಧಾರಿತ ರೇಷನ್ ವ್ಯವಸ್ಥೆಯ ಕೆಲ ಬದಲಾವಣೆ ಹಿನ್ನೆಲೆಯಲ್ಲಿ ಸೋಮವಾರ ಪಡಿತರ ತೆಗೆದುಕೊಳ್ಳ ಹೋದ ಬೋದಾರ್ ಬಳಿ ಆತನ ಮಗ ರಾಜುವಿನ ಆಧಾರ್ ಕಾರ್ಡ್ ಮಾಹಿತಿ ಕೇಳಲಾಗಿದೆ.
ಆಗ ಆಧಾರ್ ತೋರಿಸಲು ಬೋದಾರ್ ವಿಫಲವಾಗಿದ್ದು ಇದರಿಂದ ಅನುಮಾನಗೊಂಡ ಪಿಡಿಎಸ್ ಅಧಿಕಾರಿಗಳು ರಾಜುವನ್ನು ಹುಡುಕಿಕೊಂಡು ಮನೆಗೆ ಆಗಮಿಸಿದ್ದಾರೆ. ಆಗ ಅದು ಬೋದಾರ್ ಮಗನಾಗಿರದೆ ಅವನ ಮನೆಯ ನಾಯಿಯಾಗಿತ್ತು ಎನ್ನುವ ಸತ್ಯ ಬೆಳಕಿಗೆ ಬಂದಿದೆ.
ಬೋದಾರ್ ತಾನು ನಾಯಿಯ ಹೆಸರಲ್ಲಿ ಹಲವು ವರ್ಷಗಳಿಂದಲೂ ಪಡಿತರ ಸಾಮಗ್ರಿ ಒಯ್ಯ್ತಿರುವುದು ತಿಳಿದ ಅಧಿಕಾರಿಗಳು ಈ ಕುರಿತಂತೆ ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.