ಮುಂಬೈ: ಕಳ್ಳನನ್ನು ಹಿಡಿಯಲೆಂದು ಮುಫ್ತಿಯಲ್ಲಿ ಬಂದಿದ್ದ ಪೋಲೀಸರರನ್ನೇ ಮಕ್ಕಳ ಕಳ್ಳ ಎಂದು ಭಾವಿಸಿ ಜನರ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಶಿವಾಜಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕಳ್ಳರನ್ನು ಹಿಡಿಯಲು ಮುಫ್ತಿಯಲ್ಲಿ ಬಂದಿದ್ದ ಇಬ್ಬರುಪೋಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳ್ಳನೊಬ್ಬ ಪೋಲೀಸರನ್ನೇ ತೋರಿಸಿ "ಇವರು ಮಕ್ಕಳ ಕಳ್ಳರು" ಎಂದು ವದಂತಿ ಹರಡಿದ್ದಾನೆ.ಜನರು ಕಳ್ಳನ ಮಾತನ್ನು ನಂಬಿ ಮುಫ್ತಿಯಲ್ಲಿದ್ದ ಪೋಲೀಸರ ಮೇಲೆ ಹಲ್ಲೆ ನಡೆಸುತ್ತಾರೆ.ಈ ವೇಳೆ ನಿಜವಾದ ಕಳ್ಳ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಲು ಯಶಸ್ವಿಯಾಗುತ್ತಾನೆ.
ಇತ್ತ ಘಟನೆ ವಿವರ ತಿಳಿದ ಶಿವಾಜಿ ನಗರ ಠಾಣೆಯ ಪಿಸಿಆರ್ ವ್ಯಾನ್ ಸ್ಥಳಕ್ಕಾಗಮಿಸಿ ಸ್ಥಳೀಯ ಜನರಿಂದ ಪೋಲೀಸರನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಪೋಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಗಲಭೆಯನ್ನು ಹತೋಟಿಗೆ ತಂದಿರುವ ಪೋಲೀಸರು ಕಳ್ಳ ವದಂತಿ ಹಬ್ಬಿಸಿ ಪರಾರಿಯಾಗಲು ಸಹಕರಿಸಿದ್ದಾರೆ ಎನ್ನಲಾದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತಪ್ಪಿಸಿಕೊಂಡ ಕಳ್ಳನನ್ನು ಹಿಡಿಯಲು ಪೋಲೀಸರು ವ್ಯಾಪಕ ಕ್ರಮ ತೆಗೆದುಕೊಂಡಿದ್ದಾರೆ.