ಮುಜಾಫರಾಬಾದ್: ಎಲ್ಒಸಿ ಬಳಿ ಭಾರತದ ವಾಯುಗಡಿ ದಾಟಿದ ಹೆಲಿಕಾಫ್ಟರ್ ಮೇಲೆ ಭಾರತೀಯ ಸೇನಾ ಪಡೆ ಗುಂಡಿನ ದಾಳಿ ನಡೆಸಿದ್ದರ ಬಗ್ಗೆ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಪಾಕ್ ಆಕ್ರಮಿತ ಕಾಶ್ಮೀರ ಪ್ರಧಾನಿ ರಾಜಾ ಫಾರೂಕ್ ಹೈದರ್ ಪ್ರತಿಕ್ರಿಯೆ ನೀಡಿದ್ದಾರೆ.
" ವಾಯು ಗಡಿ ದಾಟಿದೆ ಎನ್ನಲಾದ ವಿಮಾನದಲ್ಲಿ ನಾನೂ ಸಹ ಇದ್ದೆ. ಸ್ಥಳೀಯ ನಾಯಕನ ಅಗಲಿಕೆ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸುವುದಕ್ಕಾಗಿ ಪೂಂಚ್ ಸೆಕ್ಟರ್ ಬಳಿ ಇದ್ದ ಗ್ರಾಮಕ್ಕೆ ತೆರಳುತ್ತಿದ್ದಾಗ ವಾಯುಗಡಿ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಆ ವಿಮಾನದ್ಲಲಿ ನಾನು ಇದ್ದೆ. ನಾವು ಯಾವುದೇ ರೀತಿಯಲ್ಲೂ ಗಡಿ ಉಲ್ಲಂಘನೆ ಮಾಡಿಲ್ಲ ಆದರೂ ಭಾರತೀಯ ಸೇನಾ ಪಡೆ ಗುಂಡಿನ ದಾಳಿ ನಡೆಸಿದೆ ಎಂದು ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಹೇಳಿದ್ದಾರೆ.
ಘಟನೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಪಾಕಿಸ್ತಾನ- ಭಾರತ ಎರಡೂ ದೇಶಗಳು ಒಪ್ಪಿರುವ ನಿಯಮಗಳ ಪ್ರಕಾರವಾಗಿ ಎಲ್ಒಸಿ ಬಳಿ ಒಂದು ಕಿ.ಮೀ ದೂರದ ವರೆಗೂ ಉಭಯ ದೇಶಗಳ ಯಾವುದೇ ಹೆಲಿಕಾಫ್ಟರ್ ಗಳೂ ಪ್ರವೇಶಿಸುವಂತಿಲ್ಲ. ವಿಮಾನಗಳು 10 ಕಿ.ಮೀ ವರೆಗೂ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.