ವಾರಣಾಸಿ: ಉತ್ತರಪ್ರದೇಶದ ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಅಮಾನತ್ತಾದ ವಿದ್ಯಾರ್ಥಿ ಗೌರವ್ ಸಿಂಗ್ (20) ಮೇಲೆ ನೆನ್ನೆ ತಡರಾತ್ರಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಮೂಲಗಳ ಪ್ರಕಾರ ಬನಾರಸ್ ವಿವಿಯ ಕ್ಯಾಂಪಸ್ ಒಳಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಹಾಸ್ಟೆಲ್ ನ ಗೇಟ್ ಬಳಿ ನಿಂತಿದ್ದ ಗೌರವ್ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಗೌರವ್ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ 1.30ರ ಸಮಯದಲ್ಲಿ ಗೌರವ್ ಸಿಂಗ್ ಬಿರ್ಲಾ ಹಾಸ್ಟೆಲ್ ಮುಂಭಾಗದ ಗೇಟ್ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗೌರವ್ ಮೇಲೆ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಗೌರವ್ ರ ಹೊಟ್ಟೆ ಮತ್ತು ಎದೆಗೆ ತಗುಲಿ, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕ್ಯಾಂಪಸ್ ಆವರಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.
ಒಟ್ಟು ಹತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ವಾರಣಾಸಿ ಪೊಲೀಸರು ತಿಳಿಸಿದ್ದು, ಘಟನೆ ಸಂಬಂಧ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ವಿದ್ಯಾರ್ಥಿಗಳ ಭದ್ರತೆ ವಿಷಯವಾಗಿ ಕ್ಯಾಂಪಸ್ ನಲ್ಲಿ ಸೃಷ್ಟಿಯಾದ ಗಲಭೆಯಲ್ಲಿ ಗೌರವ್ ಕೂಡ ಪಾತ್ರಧಾರಿ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಳೆದ ವರ್ಷ ಗೌರವ್ ಸಿಂಗ್ ನನ್ನು ಅಮಾನತ್ತು ಮಾಡಿತ್ತು. ಈ ಹಿಂಸಾಚಾರದಲ್ಲಿ ಗೌರವ್ ಬಸ್ ಸುಡಲು ಸಹಕರಿಸಿದ್ದರು ಎಂಬ ಗಂಭೀರ ಆರೋಪ ಅವರ ಮೇಲಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos