ಚೆನ್ನೈ: ನಿಮಗೆ ಧೈರ್ಯವಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ದಾಳಿ ಮಾಡಿ ನೋಡಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಬಹಿರಂಗ ಸಾವಲೆಸೆದಿದ್ದಾರೆ.
ಕೊಯಮತ್ತೂರಿನಲ್ಲಿ ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಸಿಪಿಐಎಂ ನ ಪಿಆರ್ ನಟರಾಜನ್ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಾತನಾಡಿದ ಸ್ಟಾಲಿನ್, ಇತ್ತೀಚಿಗೆ ತಮಿಳುನಾಡಿನಲ್ಲಿ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು. ಅಂತೆಯೇ ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕುತಂತ್ರ ಎಂದು ಆರೋಪಿಸಿದ ಅವರು, ಕೇಂದ್ರದ ಮೋದಿ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ತನ್ನ ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತನ್ನ ವಿರೋಧಿಗಳನ್ನು ಹಣಿಯಲು ಐಟಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡ ಸ್ಟಾಲಿನ್, ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ. ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವ ಅಧಿಕಾರಿಗಳು ಅವರು ಎಲ್ಲೆಲ್ಲಿ ದಾಳಿ ಮಾಡಿ ಎಂದು ತೋರಿಸುತ್ತಾರೆಯೋ ಅಲ್ಲೆಲ್ಲಾ ದಾಳಿ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ತಮಿಳುನಾಡಿನಲ್ಲೂ ದಾಳಿ ನಡೆಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ದಾಳಿ ಮಾಡಲಿ. ಖಂಡಿತ ಅವರಿಗೆ ಕೋಟಿ ಗಟ್ಟಲೆ ಅಕ್ರಮ ಹಣ ದೊರೆಯುತ್ತದೆ.
ಅದೇ ರೀತಿ ತಮಿಳುನಾಡು ಸಿಎಂ ಇ ಪಳನಿ ಸ್ವಾಮಿ, ಒ ಪನ್ನೀರ್ ಸೆಲ್ವಂ ಅವರ ಮನೆ ಮೇಲೂ ದಾಳಿ ನಡೆಸಲಿ. ಅಲ್ಲಿ ಅಪಾರ ಪ್ರಮಾಣದ ಹಣ ಸಿಗುತ್ತದೆ. ಪನ್ನೀರ್ ಸೆಲ್ವಂ ಅವರ ಮಗ ಕೂಡ ಥೇಣಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಅವರ ಗೆಲುವಿಗೆ ಹರಸಾಹಸ ಪಡುತ್ತಿರುವ ಪನ್ನೀರ್ ಸೆಲ್ವಂ ದುಡ್ಡಿನ ಹೊಳೆಯನ್ನೇ ಹರಿಸಲು ಸಿದ್ಧರಾಗಿದ್ದಾರೆ. ಅಲ್ಲಿ ಐಟಿ ದಾಳಿ ನಡೆಸಿ ಅಧಿಕಾರಿಗಳು ತಮ್ಮ ಸಾಮರ್ಥ್ಯ ತೋರಿಸಲಿ. ಆದರೆ ಅಧಿಕಾರಿಗಳು ದಾಳಿ ನಡೆಸುತ್ತಾರೆಯೇ ಎಂದು ಸ್ಟಾಲಿನ್ ಬಹಿರಂಗ ಸವಾಲೆಸೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos