ರಾಯ್ ಪುರ: ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮುಂದುವರೆಸಿದ್ದು, ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. ಅಂತೆಯೇ ಹಲವು ಯೋಧರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಇದೇ ಛತ್ತೀಸ್ ಘಡದ ಕಂಕೇರ್ ನಲ್ಲಿ ಕಾರ್ಯಾಚರಣೆಯಲ್ಲಿ 4 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಎನ್ ಕೌಂಟರ್ ನಡೆದಿದ್ದು, ಧಾಮತ್ರಿ ಜಿಲ್ಲೆಯ ಛಮೇಡಾ ಗ್ರಾಮದಲ್ಲಿ ಎನ್ ಕೌಂಟರ್ ನಡೆದಿದ್ದು, ಸಿಆರ್ ಪಿಎಫ್ ನ 211 ಬೆಟಾಲಿಯನ್ ಮತ್ತು ಜಿಲ್ಲಾ ನಕ್ಸಲ್ ನಿಗ್ರಹ ದಳದ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದವು. ಈ ವೇಳೆ ನಕ್ಸಲರು ಅಡಗಿರುವ ಪ್ರದೇಶದ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದ್ದು, ಈ ವೇಳೆ ತೀವ್ರ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ.
ಈ ವೇಳೆ ನಕ್ಸಲರ ಗುಂಡಿನ ದಾಳಿಗೆ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನಾಗಿದ್ದು, ಹಲವು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜಧಾನಿ ರಾಯ್ ಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೃತ ಯೋಧನನ್ನು ಸಿಆರ್ ಪಿಎಫ್ ಮುಖ್ಯ ಪೇದೆ ಹರೀಶ್ ಚಾಂದ್ ಎಂದು ಗುರುತಿಸಲಾಗಿದೆ.