ನವದೆಹಲಿ: ವಾರದ ಹಿಂದೆ ಮೃತಪಟ್ಟ ಉತ್ತರ ಪ್ರದೇಶದ ಮಾಜಿ ಸಿಎಂ ಎನ್ ಡಿ ತಿವಾರಿ ಮಗ ರೋಹಿತ್ ಶೇಖರ್ ಸಾವು ಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಾವಿನ ಹಿಂದೆ ಅವರ ಹೆಂಡತಿ ಅಪೂರ್ವ ಶುಕ್ಲಾ ಕೈವಾಡವಿರುವ ಶಂಕೆಯ ಮೇರೆಗೆ ಪೋಲಿಸರು ಅವರನ್ನು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ರೋಹಿತ್ ಶೇಖರ್ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿದ್ದ ದೆಹಲಿ ಅಪರಾಧ ವಿಭಾಗದ ಅಧಿಕಾರಿಗಳು ವಿಧಿವಿಜ್ಞಾನ ವರದಿಗೆ ಕಾಯುತ್ತಿದ್ದಾರೆ. ರೋಹಿತ್ ಸಾವಿನಲ್ಲಿ ಮನೆಯಲ್ಲಿ ಇರುವ ಶಂಕಿತ ವ್ಯಕ್ತಿಗಳು ಕಾರಣವಾಗಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ನಮಗೆ ಇದುವರೆಗೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಮನೆಯಲ್ಲಿ ಕೆಲಸ ಮಾಡುವ ಇಬ್ಬರ ಸಹಾಯದಿಂದಾಗಿ ಶುಕ್ಲಾ, ಗಂಡನ ಸಾವಿನ ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಈ ಕುರಿತು ತನಿಖೆಗಾಗಿ ದೆಹಲಿ ಪೊಲೀಸರು ಭಾನುವಾರ ಶುಕ್ಲಾರನ್ನು ವಶಕ್ಕೆ ಪಡೆದಿದ್ದು, ಅವರನ್ನು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನು ರೋಹಿತ್ ಹಾಗೂ ಶುಕ್ಲಾ ನಡುವೆ ಉತ್ತಮ ಸಂಬಂಧವಿರಲಿಲ್ಲ ಎಂದು ಶೇಖರ್ ಅಮ್ಮ ಉಜ್ವಲ ತಿವಾರಿ ಈ ಹಿಂದಿನ ವಿಚಾರಣೆಯಲ್ಲಿ ತಿಳಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಭೋಲು ಮಂಡಲ್ ಎಂಬಾತ ರೋಹಿತ್ ಮೂಗಿನಿಂದ ರಕ್ತ ಸೋರುತ್ತಿತ್ತು ಎಂದು ಈತ ತಿಳಿಸಿದ್ದ.
ರೋಹಿತ್ ಶೇಖರ್ ಅವರು ಈ ಹಿಂದೆ ಎನ್ ಡಿ ತಿವಾರಿ ನನ್ನ ಅಪ್ಪ. ಆದರೆ ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಏಳು ವರ್ಷಗಳ ಕಾಲ ವಿಚಾರಣೆ ನಡೆದ ಬಳಿಕ 2014ರಲ್ಲಿ ಡಿಎನ್ಎ ಪರೀಕ್ಷೆಯಲ್ಲಿ ರೋಹಿತ್ ಮಾಜಿ ಸಿಎಂ ಅವರ ಮಗ ಎಂಬುದು ಸಾಬೀತಾಗಿತ್ತು. ಬಳಿಕ ತಮ್ಮ ಮಗ ಎಂದು ರೋಹಿತ್ ಅವರನ್ನು ತಿವಾರಿ ಒಪ್ಪಿಕೊಂಡಿದ್ದರು.