ಸೂರತ್: ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದ್ದು, ಆತನನ್ನು ಪ್ರಕರಣದಲ್ಲಿ ಅಪರಾಧಿ ಎಂದು ಸೂರತ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆಶ್ರಮದಲ್ಲಿ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಸಿಕ್ಕಿಬಿದ್ದಿದ್ದ ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಮತ್ತು ಆತನ ಪುತ್ರನ ಒಂದೊಂದೇ ಆರೋಪಗಳು ಸಾಬೀತಾಗುತ್ತಿದ್ದು, ಇಂದು ಅಸಾರಾಂ ಬಾಪು ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣ ಸಾಬೀತಾಗಿದ್ದು, ಸೂರತ್ ನ್ಯಾಯಾಲಯ ನಾರಾಯಣ ಸಾಯಿ ಅಪರಾಧಿ ಎಂದು ಘೋಷಣೆ ಮಾಡಿದೆ.
ನಾರಾಯಣ ಸಾಯಿ ಸೂರತ್ ಮೂಲದ ಸಹೋದರಿಯರ ಮೇಲೆ ಆಶ್ರಮದಲ್ಲಿ ನಿರಂತರ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ನಾರಾಯಣ ಸಾಯಿಗೆ ಇದೇ ಏಪ್ರಿಲ್ 30ರಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡುವುದಾಗಿ ಹೇಳಿದೆ.
2013ರಲ್ಲಿ ಅಸರಾಂಬಾಪು ಅಶ್ರಮದಲ್ಲಿದ್ದ ಇಬ್ಬರು ಸಹೋದರಿಯರು ತಮ್ಮ ಮೇಲೆ ಅಸಾರಾಂ ಬಾಪು ಮತ್ತು ಆತನ ಪುತ್ರ ನಾರಾಯಣ ಸಾಯಿ ನಿರಂತರ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದರು. 2002ರಿಂದ 200ರವರೆಗೂ ತಾನು ಅಸಾರಾಂ ಬಾಪು ಆಶ್ರಮದಲ್ಲಿದ್ದ ಸಂದರ್ಭದಲ್ಲಿ ತಂದೆ ಹಾಗೂ ಮಗ ಇಬ್ಬರೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ನಾರಾಯಣ ಸಾಯಿ ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎಂದು ಸಹೋದರಿಯರು ಆರೋಪಿಸಿದ್ದರು.
ಈ ಸಂಬಂಧ ಜೋಧ್ ಪುರ ಕೋರ್ಟ್ ನಲ್ಲಿ ಅಸರಾಂ ಬಾಪು ಮತ್ತು ನಾರಾಯಣ ಸಾಯಿ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಈ ವಿಚಾರದ ಬೆನ್ನಲ್ಲೇ ನಾಪತ್ತೆಯಾಗಿದ್ದ ನಾರಾಯಣ ಸಾಯಿಯನ್ನು 2013ರಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.