ಜಬಲ್ ಪುರ: ಹಿಂದುಯೇತರ ವ್ಯಕ್ತಿ ಆಹಾರ ಸರಬರಾಜು ಮಾಡಿದ್ದಕ್ಕೆ ಆರ್ಡರ್ ರದ್ದುಪಡಿಸಿದ್ದ ಗ್ರಾಹಕನ ವಿರುದ್ದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಧಾರ್ಮಿಕ ದ್ವೇಷಕಾರಿ ಭಾವನೆಯನ್ನು ಹರಡುವುದಿಲ್ಲ ಎಂಬ ಲಿಖಿತ ಒಪ್ಪಿಗೆಯನ್ನು ಜೋಮ್ಯಾಟೋ ಗ್ರಾಹಕ ಅಮಿತ್ ಶುಕ್ಲಾ ಅವರಿಂದ ಜಬಲ್ ಪುರ ಪೊಲೀಸರು ಇಂದು ಪಡೆದುಕೊಂಡಿದ್ದಾರೆ.
ಹಿಂದುಯೇತರ ವ್ಯಕ್ತಿಯ ಆಹಾರ ಡೆಲಿವರಿ ಬೇಡ ಎಂದು ಶುಕ್ಲಾ ಬುಧವಾರ ಆಹಾರವನ್ನು ನಿರಾಕರಿಸಿದ್ದರು. ಹಿಂದುಯೇತರ ವ್ಯಕ್ತಿಯ ಮೂಲಕ ಆಹಾರ ಕಳಿಸಿದ್ದಾರೆ, ನಾನದನ್ನು ಸ್ವೀಕರಿಸುತ್ತಿಲ್ಲ. ಆರ್ಡರ್ ರದ್ದುಪಡಿಸಲು ಕೋರಿದಾಗ, ಹಣ ಮರುಪಾವತಿಯಾಗುವುದಿಲ್ಲ ಎಂದಿದ್ದಾರೆ. ಆಹಾರ ತೆಗೆದುಕೊಳ್ಳಲು ಬಲವಂತ ಮಾಡುವಂತಿಲ್ಲ ಎಂಬ ಕಾರಣಕ್ಕೆ ನನಗೆ ರೀಫಂಡ್ ಬೇಡ, ನನ್ನ ಆರ್ಡರ್ ರದ್ದುಪಡಿಸಿ" ಎಂದು ಆತ ಬರೆದುಕೊಂಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಕಂಪನಿ, ಆಹಾರಕ್ಕೆ ಯಾವುದೇ ಧರ್ಮವಿಲ್ಲ ಎಂದು ಖಡಕ್ ಉತ್ತರ ನೀಡಿತ್ತು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಗ್ರಾಹಕ ಅಮಿತ್ ಶುಕ್ಲಾನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನೋಟಿಸ್ ನೀಡಿದ್ದಾರೆ.