ಕ್ವಿಟ್ ಇಂಡಿಯಾ ದಿನದಂದು ದೇಶಾದ್ಯಂತ 'ಇವಿಎಂ ತೊಲಗಿಸಿ' ಭಾರಿ ಆಂದೋಲನ
ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 'ಬ್ರಿಟಿಷರೇ ದೇಶ ಬಿಟ್ಟು ತೊಲಗಿ' ಸತ್ಯಾಗ್ರಹದ ಸ್ಮರಣಾರ್ಥ ಆಗಸ್ಟ್ 9ರಂದು ಹಲವು ನಾಗರಿಕ ಸಮಾಜದ ಸಂಸ್ಥೆಗಳು, ವಿದ್ಯುನ್ಮಾನ ಯಂತ್ರ (ಇವಿಎಂ) ಬಳಕೆ ವಿರುದ್ಧ 'ಇವಿಎಂ ತೊಲಗಿಸಿ, ಬ್ಯಾಲಟ್ ಪೇಪರ್ ಮರಳಿಸಿ, ದೇಶ ರಕ್ಷಿಸಿ ' ಎಂಬ ಘೋಷಣೆಯಡಿ ದೇಶಾದ್ಯಂತ ಪ್ರತಿಭಟನೆ ನಡೆಸಲಿವೆ.
ದೆಹಲಿಯಲ್ಲಿ ಜುಲೈ 14ರಂದು ರಾಷ್ಟ್ರೀಯ ಪೀಪಲ್ಸ್ ಮೂವ್ ಮೆಂಟ್ (ಎನ್ ಎಪಿಎಂ) ರಾಷ್ಟ್ರೀಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಸಂಯೋಜಕ ಭುಪೇಂದರ್ ಸಿಂಗ್ ರಾವತ್ ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಹಲವು ರಾಜಕೀಯ ವಿಶ್ಲೇಷಕರು ಫಲಿತಾಂಶದ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳನ್ನು ವಿಶ್ಲೇಷಿಸುತ್ತಿದ್ದರು. ಈ ಎಲ್ಲಾ ವಿಶ್ಲೇಷಣೆಗಳು ಹೆಚ್ಚಾಗಿ ರಾಜಕೀಯ ಹಾಗೂ ಸಾಂಸ್ಥಿಕ ಮಿತಿಯಲ್ಲಿದ್ದವು.
ದೇಶದಲ್ಲಿ ರಾಜಕೀಯ ಹಾಗೂ ಸಾಂಸ್ಥಿಕ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂಬುದು ನಮಗೆ ಅರಿವಾಗುತ್ತಿದ್ದಂತೆ, ವಿದ್ಯುನ್ಮಾನ ಯಂತ್ರಗಳ ಬಳಕೆಯಿಂದ ಭಾರತೀಯ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯವನ್ನು ಕೂಡ ಗುರುತಿಸುವುದು ಅತಿ ಅಗತ್ಯವಾಗಿದೆ. 2019ರ ಚುನಾವಣೆಯಲ್ಲಿ ಹಲವು ಆತಂಕಕಾರಿ ಇವಿಎಂ ಮತಯಂತ್ರಗಳ ವ್ಯತ್ಯಾಸಗಳು ಸಾರ್ವಜನಿಕ ವಲಯದ ಗಮನಕ್ಕೆ ಬಂದಿದೆ. ನಾವೆಲ್ಲರೂ ಈ ಉತ್ತರ ಸಿಗದ ಪ್ರಶ್ನೆಗಳನ್ನು ಎತ್ತುವ ಮೂಲಕ ಪ್ರಜಾಪ್ರಭುತ್ವ ಹಾಗೂ ದೇಶವನ್ನು ಕಾಪಾಡಬೇಕಿದೆ ಎಂದರು.
ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳ ಚುನಾವಣೆಯಲ್ಲಿ, ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿರುವ ಇವಿಎಂ ಗಳ ಮತಗಳು ಹಾಗೂ ಚಲಾವಣೆಯಾದ ಮತಗಳ ನಡುವೆ ಭಾರಿ ವ್ಯತ್ಯಾಸವಿದೆ. ಚುನಾವಣಾ ಆಯೋಗದ ವರದಿ ಪ್ರಕಾರ, ಸಾರ್ವತ್ರಿಕ ಚುನಾವಣೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ 17.4 ಲಕ್ಷ ವಿವಿ ಪ್ಯಾಟ್ ಗಳನ್ನು ಸಿದ್ಧವಾಗಿರಿಸಲಾಗಿತ್ತು. ಇವಿಎಂ ಹಾಗೂ ವಿವಿಪ್ಯಾಟ್ ಗಳಿಗೆ ಬಿಇಎಲ್ ಹಾಗೂ ಇಸಿಐಎಲ್ ಇಂಜಿನಿಯರ್ ಗಳು ಲ್ಯಾಪ್ ಟಾಪ್ ಮೂಲಕ ವಿವರಗಳು ಹಾಗೂ ಚಿಹ್ನೆಗಳನ್ನು ಅಪ್ ಲೋಡ್ ಮಾಡಿದ್ದರು. ಇವರು ದಿನವೊಂದಕ್ಕೆ ಸರಾಸರಿ 41, 428 ವಿವಿಪ್ಯಾಟ್ ಗಳನ್ನು ಸಿದ್ಧಪಡಿಸಿದ್ದರು.
ಆದರೆ, ಭಾರತೀಯ ಚುನಾವಣಾ ಆಯೋಗ, ಉತ್ತರಾಖಂಡದ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಆಶಿಷ್ ಗೋಯಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಇವಿಎಂ ಯಂತ್ರಗಳಿಗೆ ಬ್ಯಾಲಟ್ ಯೂನಿಟ್ ಗಳನ್ನು ಅಪ್ ಲೋಡ್ ಮಾಡಲು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಇದಲ್ಲದೆ, ಇವಿಎಂ ಗಳ ನಿರ್ವಹಣೆಗೆ 60 ಆಪ್ತ ಸಲಹೆಗಾರರನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದೇಕೆ ಹೀಗಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.
ಇತರ ನಾಗರಿಕ ಸಮಾಜದ ನಾಯಕರು ಇವಿಎಂಗಳನ್ನು ಕಾನೂನುಬಾಹಿರವಾಗಿ ಕಾರುಗಳು ಹಾಗೂ ಅಂಗಡಿಗಳಲ್ಲಿ ಸಂಗ್ರಹಿಸಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ಈ ಸುದ್ದಿಗಳು ಏಳನೇ ಸುತ್ತಿನ ಚುನಾವಣೆ ನಂತರವಷ್ಟೇ ಹೊರಬಿದ್ದಿದೆ . ದುರದೃಷ್ಟವಶಾತ್ ವಿಪಕ್ಷಗಳು ಇಲ್ಲವೇ ನಾಗರಿಕ ಸಮಾಜದ ಸದಸ್ಯರು ಮೊದಲ ಹಂತದ ಚುನಾವಣೆಯಿಂದ ಇದರ ಮೇಲೆ ಗಮನವಿಟ್ಟಿಲ್ಲ ಎಂದರು.
ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಪ್ರಶಾಂತ್ ಟಂಡನ್, ಚುನಾವಣಾ ಆಯೋಗದ ವಶದಲ್ಲಿದ್ದ 20 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂದು ಆರೋಪಿಸಿದರು.
ಇವಿಎಂಗಳನ್ನು ತಯಾರಿಸಿದ್ದ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಹಾಗೂ ಬೆಂಗಳೂರಿನ ಬಿಇಎಲ್ ಸಂಸ್ಥೆಗಳು ಕೇಂದ್ರ ಸರ್ಕಾರದ ಉದ್ದಿಮೆಗಳಾಗಿದ್ದು, ಕೇಂದ್ರದ ನೇರ ನಿಯಂತ್ರಣದಲ್ಲಿವೆ ಎಂಬುದು ಕೂಡ ಆತಂಕಕಾರಿ ವಿಷಯವೇ. ಈ 20 ಲಕ್ಷ ಇವಿಎಂಗಳನ್ನು ಇಲ್ಲಿಯವರೆಗೆ ಪತ್ತೆ ಹಚ್ಚಲಾಗಿದೆಯೇ? ಯಾವುದಾದರೂ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.
2009ರ ಚುನಾವಣೆ ನಂತರ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಕೂಡ ಇವಿಎಂ ಯಂತ್ರಗಳು ದೋಷಗಳಿಂದ ಕೂಡಿದೆ. ಅಮೆರಿಕ, ಜರ್ಮನಿಯಲ್ಲಿ ಅವುಗಳನ್ನು ನಿಷೇಧಿಸಲಾಗಿದೆ ಎಂಬ ಅಂಶವನ್ನು ಪ್ರಸ್ತಾಪಿಸಿದ್ದರು ಎಂದರು. ಆಗಸ್ಟ್ 29ರಂದು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos