ದೇಶ

ದೇವರನಾಡು ಕೇರಳದಲ್ಲಿ ಭಾರೀ ಮಳೆ; ಮೂವರ ಸಾವು, ನಾಲ್ಕು ಜಿಲ್ಲೆಗಳಿಗೆ ಎಚ್ಚರಿಕೆ

Sumana Upadhyaya
ತಿರುವನಂತಪುರ: ದೇವರನಾಡು ಕೇರಳದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಲವು ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಭಾರೀ ಮಳೆಗೆ ಇಬ್ಬರು ಮೃತಪಟ್ಟಿದ್ದು ನೂರಾರು ಮಂದಿ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 
ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬಲ್ಲಿ ವ್ಯಕ್ತಿಯೊಬ್ಬ ಮನೆಗೆ ಮರ ಬಿದ್ದು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ವಯನಾಡ್ ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನ್ನುತಿ ಎಂಬಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
ಉತ್ತರ ಕೇರಳದ ಹಲವು ನದಿಗಳು ತುಂಬಿ ಹರಿಯುತ್ತಿದ್ದು ಅಣೆಕಟ್ಟುಗಳ ಗೇಟ್ ಗಳನ್ನು ತೆರೆಯಲು ಅಧಿಕಾರಿಗಳು ಆದೇಶಿಸಿದ್ದಾರೆ. ಮಲ್ಲಪುರಂನ ನಿಲಂಬುರ್ ಮತ್ತು ಎತ್ತರದ ಪ್ರದೇಶಗಳಾದ ಕೋಝಿಕ್ಕೋಡು, ಕಣ್ಣೂರು, ಇಡುಕ್ಕಿ ಮತ್ತು ಪಾಲಕ್ಕಾಡ್ ಗಳು ಮಳೆಗೆ ತತ್ತರಿಸಿ ಹೋಗಿವೆ.
ಮಣ್ಣೂರು, ಕಣ್ಣೂರು ಜಿಲ್ಲೆಯ ಇರಿಕ್ಕೂರಿನಲ್ಲಿ, ಮಲಪ್ಪುರಂನ ನೀಲಾಂಬುರ್ ಅರಣ್ಯ ಪ್ರದೇಶಗಳು ಭಾರೀ ಪ್ರವಾಹಕ್ಕೆ ಬೇರೆ ಕಡೆಯಿಂದ ಸಂಪರ್ಕ ಕಳೆದುಕೊಂಡಿವೆ. ಆಲಪ್ಪುರದ ಕುಟ್ಟನಾಡು ಎಂಬಲ್ಲಿ ಬೆಳೆದು ನಿಂತಿದ್ದ ಫಸಲುಗಳು ನೀರಿಗೆ ಕೊಚ್ಚಿ ಹೋಗಿವೆ.
ಮಲಪ್ಪುರಂ, ಕೋಝಿಕ್ಕೋಡು, ವಯನಾಡು ಮತ್ತು ಇಡುಕ್ಕಿ ನಾಲ್ಕು ಜಿಲ್ಲೆಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.ಕೇರಳದ ಉತ್ತರ ಭಾಗ ಮತ್ತು ಇಡುಕ್ಕಿಯಲ್ಲಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಪರಿಸ್ಥಿತಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಭೆ ಕರೆದಿದೆ. ಸರ್ಕಾರ ಈಗಾಗಲೇ ಎನ್ ಡಿಆರ್ ಎಫ್ ನ ಸಹಾಯ ಕೋರಿದೆ.
ಇದುವರೆಗೆ ಒಟ್ಟು 1385 ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕಳುಹಿಸಲಾಗಿದೆ.
SCROLL FOR NEXT