ದೇಶ

ರಾಹುಲ್ ಗೆ ಕಾಶ್ಮೀರ ಗೌರ್ನರ್ ಆಹ್ವಾನದ ಬೆನ್ನಲ್ಲೇ ಸರ್ವಪಕ್ಷ ನಾಯಕರ ಭೇಟಿ ಅವಕಾಶಕ್ಕೆ ಹೆಚ್ಚಿದ ಒತ್ತಡ!

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್, ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಮತ್ತು ಜನರನ್ನು ಭೇಟಿ ಮಾಡಲು ಎಲ್ಲಾ ಪಕ್ಷದ ನಾಯಕರ ನಿಯೋಗಕ್ಕೆ ಕಣಿವೆ ಭೇಟಿಗೆ ಅವಕಾಶ ನೀಡಬೇಕು ಎಂದು ಸರ್ಕಾರನ್ನು ಒತ್ತಾಯಿಸಿದೆ. 

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್, ರಾಹುಲ್ ಗಾಂಧಿ ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಅದು ಪ್ರಚಾರವಾಗುತ್ತಿದೆ. ರಾಹುಲ್ ಗಾಂಧಿ ಇಲ್ಲಿನ ಪರಿಸ್ಥಿತಿಯನ್ನು ನೋಡಬೇಕೆಂದಿದ್ದರೆ ನಾನು ವಿಶೇಷ ವಿಮನ ಕಳಿಸುತ್ತೇನೆ ಬರಲಿ ಎಂದು ಸವಾಲು ಹಾಕಿದ್ದರು. 

ಕಾಶ್ಮೀರ ರಾಜ್ಯಪಾಲರ ಆಹ್ವಾನವನ್ನು ಸ್ವೀಕರಿಸಿದ್ದ ರಾಹುಲ್ ಗಾಂಧಿ ವಿಶೇಷ ವಿಮಾನ ಬೇಡ ಆದರೆ ನಾನು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಈ ಬೆನ್ನಲ್ಲೆ ಸಿಪಿಐ(ಎಂ) ಕಾಂಗ್ರೆಸ್ ನಾಯಕರು ಸರ್ವಪಕ್ಷ ನಾಯಕರ ಭೇಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಡ ಹೇರಲು ಪ್ರಾರಂಭಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಹಿರಿಯ ವಕ್ತಾರ ಆನಂದ್ ಶರ್ಮಾ, 'ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಕಾಳಜಿ ಇದೆ. ದೂರಸಂಪರ್ಕ ಹಾಗೂ ಇಂಟರ್ನೆಟ್‌ ಜಾಲ ಸ್ಥಗಿತ ಹಾಗೂ ಕಣಿವೆಯ ಜನರು ತಮ್ಮ ಕುಟುಂಬಗಳನ್ನು ತಲುಪಲು ಅನುಮತಿಸದಿರುವ  ಬಗ್ಗೆ ಆತಂಕಗೊಂಡಿದ್ದೇವೆ.' ಎಂದು ಹೇಳಿದ್ದಾರೆ. 

ಭಾರತದಂತಹ  ಬಹು ವೈವಿಧ್ಯ ದೇಶದಲ್ಲಿ ನಾಗರಿಕರ ಮೂಲಭೂತ ಹಕ್ಕನ್ನು ನಿಗ್ರಹಿಸುವ ಸರ್ಕಾರದ  ಉದ್ದೇಶಕ್ಕೆ ಅವಕಾಶ ನೀಡಬಾರದು. ಕಳೆದ 11 ದಿನಗಳಿಂದ  ಬಂಧನಕ್ಕೊಳಗಾಗಿರುವ ನಾಯಕರ ಬಿಡುಗಡೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಿ, ಕಣಿವೆಗೆ ಭೇಟಿ ನೀಡಿ ಜನರನ್ನು ಸಂಪರ್ಕಿಸಲು ರಾಜಕೀಯ  ಪಕ್ಷಗಳ ನಿಯೋಗಕ್ಕೆಅವಕಾಶ  ನೀಡಬೇಕೆಂದು ಸರ್ಕಾರ ಮತ್ತು ಜಮ್ಮು-ಕಾಶ್ಮೀರದ ಆಡಳಿತವನ್ನು ಒತ್ತಾಯಿಸುತ್ತಿದ್ದೇವೆ.' ಎಂದು ಅವರು ಹೇಳಿದ್ದಾರೆ.

SCROLL FOR NEXT