ದೇಶ

ಉತ್ತರ ಭಾರತದ ರಾಜ್ಯಗಳಲ್ಲೂ ಮಳೆ, ಪ್ರವಾಹದ ಆರ್ಭಟ: 30 ಸಾವು

Srinivasamurthy VN

ನವದೆಹಲಿ: ದಕ್ಷಿಣ ಭಾರತದಲ್ಲಿನ ಮಳೆ, ಪ್ರವಾಹ ಅನೇಕ ಜನರನ್ನು ಅಪೋಶನ ಮಾಡಿ, ಸಾಕಷ್ಟು ಅನಾಹುತ ಸೃಷ್ಟಿ ಮಾಡಿದ ನಂತರ ಈಗ ಉತ್ತರ ಭಾರತದ  ಹಿಮಾಚಲ ಪ್ರದೇಶ, ಪಂಜಾಬ್ ಉತ್ತರಾಖಂಡ ಸೇರಿದಂತೆ ಅನೇಕ ರಾಜ್ಯಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿವೆ ಮಳೆ ,ಪ್ರವಾಹದ ಅವಗಢದಿಂದ 30 ಜನ ಮೃತಪಟ್ಟಿದ್ದು ಇತರೆ ಹಲವಾರು ಮಂದಿ ಕಾಣೆಯಾಗಿದ್ದಾರೆ.  

ಹವಾಮಾನ ಇಲಾಖೆ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದರಿಂದ ಉತ್ತರಾಖಂಡ ಮತ್ತು ಪಂಜಾಬ್‌ನ ಅಧಿಕಾರಿಗಳು ಅನೇಕ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ  ಪ್ರಾರಂಭಿಸಿದ್ದಾರೆ. 

ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿ ಯಮುನಾ ಸೇರಿದಂತೆ ಅನೇಕ  ನದಿಗಳು ಅಪಾಯಕಾರಿ ಮಟ್ಟಕ್ಕೆ ಮೀರಿ ಹರಿಯುತ್ತಿದ್ದು ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ದೆಹಲಿ ಸರ್ಕಾರ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮಳೆ , ಪ್ರವಾಹದಿಂದ  ಹೆಚ್ಚಿನ ಹಾನಿ ಸಂಭವಿಸಿದೆ ಎಂದೂ ವರದಿಯಾಗಿದೆ. ನಿರಂತರ ಮಳೆಯ ಕಾರಣ  ಭೂಕುಸಿತ ಉಂಟಾಗಿ  ರಸ್ತೆ ಸಂಪರ್ಕ ಹಾಳಾಗಿದೆ , ಜಲವಿದ್ಯುತ್ ಯೋಜನೆಗಳು  ಸ್ಥಗಿತಗೊಂಡಿವೆ.  ಈ ಪ್ರದೇಶದ ಅನೇಕ  ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.  

ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 23, ಉತ್ತರಖಂಡದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದರೆ, ಇತರೆ ಹಲವಾರು ಜನ ಕಾಣೆಯಾಗಿದ್ದಾರೆ ಎಂದೂ ವರದಿಯಾಗಿದೆ. ಪಂಜಾಬ್‌ನ ಓಲ್ ಗ್ರಾಮದಲ್ಲಿ,  ಮನೆಯ ಚಾವಣಿ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT