ದೇಶ

ಪೌರತ್ವ ತಿದ್ದುಪಡಿ ಮಸೂದೆ:ಈಶಾನ್ಯ ರಾಜ್ಯಗಳಲ್ಲಿ ತೀವ್ರಗೊಂಡ ಪ್ರತಿಭಟನೆ, ತ್ರಿಪುರಾದಲ್ಲಿ ಮೊಬೈಲ್ ಸಂಪರ್ಕ ಕಡಿತ 

Sumana Upadhyaya

ಗುವಾಹಟಿ/ ಕೋಲ್ಕತ್ತಾ: ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆಗೆ ಈಶಾನ್ಯ ರಾಜ್ಯಗಳ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ನಿನ್ನೆಯಿಂದ ಪ್ರತಿಭಟನೆ, ಕೋಲಾಹಲ ತೀವ್ರವಾಗಿದೆ.


ಚೀನಾ, ಬಾಂಗ್ಲಾದೇಶ, ಮೈನ್ಮಾರ್ ಮತ್ತು ಭೂತಾನ್ ದೇಶಗಳ ಜೊತೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಜನರು ಮಸೂದೆ ಜಾರಿಗೆ ವಿರೋಧಿಸಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮಸೂದೆ ದೇಶದ ಮುಸ್ಲಿಂರ ವಿರುದ್ಧವಾಗಿ ಇಲ್ಲ, ದೇಶದೊಳಗೆ ಅಕ್ರಮವಾಗಿ ಒಳನುಸುಳುಕೋರರನ್ನು ತಡೆಯಲು ಈ ಮಸೂದೆ ಅಸ್ತ್ರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರೂ ಕೂಡ ತ್ರಿಪುರಾದಲ್ಲಿ ಪ್ರತಿಭಟನಾಕಾರರು ಸಂಪೂರ್ಣ ಬಂದ್ ಗೆ ಕರೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ತ್ರಿಪುರಾದಲ್ಲಿ 48 ಗಂಟೆಗಳ ಬಂದ್ ಗೆ ಕರೆ ನೀಡಲಾಗಿದ್ದು ಎಸ್ಎಂಎಸ್ ಮತ್ತು ಮೊಬೈಲ್ ಸಂಪರ್ಕ ಸೇವೆಯನ್ನು ಕಡಿತಗೊಳಿಸಲಾಗಿದೆ.


ಆಲ್ ಮೊರನ್ ಸ್ಟೂಡೆಂಟ್ ಯೂನಿಯನ್(ಎಎಂಎಸ್ ಯು) 48 ಗಂಟೆಗಳ ಅಸ್ಸಾಂ ಬಂದ್ ಗೆ ಕರೆ ಕೊಟ್ಟಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದು 6 ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದೆ. ಇದರಿಂದ ರಾಜ್ಯದ ಹಲವೆಡೆ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.


ನಿನ್ನೆ ನೂರಾರು ಮಹಿಳೆಯರು, ಮಕ್ಕಳು ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಬೀದಿಗಳಿದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ದಿಬ್ರುಗರ್ ಮತ್ತು ಗುವಾಹಟಿಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹಲವು ಬಸ್ಸುಗಳು ಪೊಲೀಸರ ರಕ್ಷಣೆಯಲ್ಲಿ ಸಂಚಾರ ನಡೆಸಬೇಕಾಯಿತು.


ಬಂದ್ ನಿಂದಾಗಿ ಕಾಜಿರಂಗಾ ನ್ಯಾಶನಲ್ ಪಾರ್ಕ್ ನಲ್ಲಿ ಹಲವು ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಸಿಕ್ಕಿಹಾಕಿಕೊಳ್ಳಬೇಕಾಯಿತು. ಗುವಾಹಿಟಿಗೆ ಕರೆದುಕೊಂಡು ಹೋಗಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿರಲಿಲ್ಲ. 

SCROLL FOR NEXT