ದೇಶ

ಪೌರತ್ವ ತಿದ್ದುಪಡಿ ಮಸೂದೆ: ಇಂದು ರಾಜ್ಯಸಭೆಯಲ್ಲಿ ಪಾಸಾ, ಫೇಲಾ? 

Sumana Upadhyaya

ನವದೆಹಲಿ:ದೇಶಾದ್ಯಂತ ಸದ್ಯ ಬಹು ಚರ್ಚಿತವಾಗಿರುವ ಕೇಂದ್ರ ಎನ್ ಡಿಎ ಸರ್ಕಾರದ ಮಹಾತ್ವಾಕಾಂಕ್ಷಿ ಪೌರತ್ವ(ತಿದ್ದುಪಡಿ)ಮಸೂದೆ 2019 ಬುಧವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ರಾಜ್ಯಸಭೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಬಹುಮತ ಸಿಕ್ಕಿ ಮಸೂದೆ ಅಂಗೀಕಾರವಾಗಬಹುದು ಎಂದು ತಿಳಿದಿದ್ದರೂ ವಿರೋಧ ಪಕ್ಷ ಹೋರಾಟದಿಂದ ಹಿಂದೆ ಸರಿದಿಲ್ಲ.


ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಲು ತೀರ್ಮಾನಿಸಿದೆ.ಉದ್ದೇಶಿತ ಮಸೂದೆಯ ಪರಿಶೀಲನೆಗೆ ಆಯ್ದ ಸಮಿತಿಗೆ ಕಳುಹಿಸಬೇಕೆಂದು ಹೇಳಿದೆ.


ಮೊನ್ನೆ ಲೋಕಸಭೆಯಲ್ಲಿ ಮಸೂದೆ ಪರವಾಗಿ ಮತ ಹಾಕಿದ್ದ ಶಿವಸೇನೆ ನಿನ್ನೆ ವಿರೋಧ ಪಕ್ಷಗಳ ಪರವಾಗಿ ನಿಂತಿತು. ಮಸೂದೆಗೆ ಬೆಂಬಲ ನೀಡುವ ವಿಚಾರವಾಗಿ ಜೆಡಿಯುನಲ್ಲಿ ಭಿನ್ನತೆ ಕಂಡುಬಂದಿದೆ. ಜೆಡಿಯುನ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ಕುಮಾರ್ ವರ್ಮ ಪಕ್ಷದ ತೀರ್ಮಾನವನ್ನು ಟೀಕಿಸಿದ್ದಾರೆ.


ಇಂದು ರಾಜ್ಯಸಭೆಯಲ್ಲಿ ಕೂಡ ಮಸೂದೆಗೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ. ಬಿಜೆಪಿ ಈ ಸಂದರ್ಭದಲ್ಲಿ ಬಿಜೆಡಿ, ಟಿಡಿಪಿ, ಎಐಎಡಿಎಂಕೆ ಮತ್ತು ವೈಎಸ್ಆರ್ ಸಿಪಿಯ ಬೆಂಬಲವನ್ನು ನಿರೀಕ್ಷಿಸುತ್ತಿದ್ದು ರಾಜ್ಯಸಭೆಯಲ್ಲಿ 128 ಸದಸ್ಯರ ಬೆಂಬಲ ನಿರೀಕ್ಷಿಸುತ್ತಿದೆ. 


ಪೌರತ್ವ ತಿದ್ದುಪಡಿ ಮಸೂದೆಗೆ ಎಷ್ಟು ಸದಸ್ಯರು ಬೆಂಬಲ ನೀಡುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಲ್ಲ. ನಮಗೆ ಬೇಕಾಗಿರುವುದು ಬಹುಮತ ವರ್ಸಸ್ ನೈತಿಕತೆ, ಎಲ್ಲದಕ್ಕೂ ನಾವು ಉತ್ತರ ಬಯಸುತ್ತೇವೆ ಎಂದು ಟಿಎಂಸಿ ಸಂಸದ ದೆರೆಕ್ ಒಬ್ರಿಯಾನ್ ಹೇಳಿದ್ದಾರೆ.

SCROLL FOR NEXT