ದೇಶ

ಪ್ರಧಾನಿ ಟೀ ಮಾರುತ್ತಿದ್ದರು, ಹೀಗಾಗಿ ಬಿಜೆಪಿಗೆ ಟೀ ಅಂದರೆ ಆಗಲ್ಲ: ಉದ್ಧವ್‌ ಠಾಕ್ರೆ ವ್ಯಂಗ್ಯ

Shilpa D

ನಾಗಪುರ:  ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀ ಮಾರಾಟ ಮಾಡುತ್ತಿದ್ದರಲ್ಲ, ಹೀಗಾಗಿ ಅವರಿಗೆ ಟೀ ಎಂದರೆ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ಆಯೋಜಿಸುವ ಸಾಂಪ್ರದಾಯಿಕ ಔತಣಕೂಟಕ್ಕೆ (ಟೀ ಪಾರ್ಟಿ) ಬಿಜೆಪಿ ನಾಯಕರು ಗೈರುಹಾಜರಾಗಿದ್ದು ಉದ್ಧವ್ ಅವರನ್ನು ಕೆರಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ‘ನಾನೂ ಟೀ ಮಾರುತ್ತಿದ್ದೆ’ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ಮಹಾರಾಷ್ಟ್ರ ಘಟಕವನ್ನು ವ್ಯಂಗ್ಯ ಮಾಡಲು ಬಳಸಿಕೊಂಡಿದ್ದಾರೆ.

‘ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಮಾನಗೊಳಿಸಿದ್ದಾರೆ. ಅಂಥವರ ಜೊತೆಗೆ ಶಿವಸೇನಾ ಕೈಜೋಡಿಸಿದೆ’ ಎಂದು ದೂರಿದ್ದ ಬಿಜೆಪಿ ವಿವಿಧ ಕಾರಣಗಳನ್ನು ಮುಂದಿಟ್ಟು ಔತಣಕೂಟದಿಂದ ದೂರ ಉಳಿದಿತ್ತು.

‘ನಮ್ಮ ಪ್ರಧಾನಿಯ ಹಿನ್ನೆಲೆ ನಮಗೆ ಗೊತ್ತು. ಅವರು ಒಂದು ಕಾಲಕ್ಕೆ ಟೀ ಮಾರುತ್ತಿದ್ದರು. ಆದರೆ ನನಗೆ ನಮ್ಮ ರಾಜ್ಯದ ಬಿಜೆಪಿ ನಾಯಕರು ಟೀ ಕುಡಿಯಲು ಯಾಕೆ ಬರಲಿಲ್ಲವೋ ಅರ್ಥವಾಗಲಿಲ್ಲ. ಬಹುಶಃ ಪ್ರಧಾನಿಯೊಂದಿಗೆ ಮಹಾರಾಷ್ಟ್ರ ಬಿಜೆಪಿ ಘಟಕದ ನಾಯಕರಿಗೆ ಭಿನ್ನಾಭಿಪ್ರಾಯ ಇರಬಹುದು’ ಎಂದು ಠಾಕ್ರೆ ಲೇವಡಿ ಮಾಡಿದ್ದಾರೆ.

SCROLL FOR NEXT