ದೇಶ

ಸಿಎಎ, ಎನ್ ಆರ್ ಸಿ ವಿರೋಧಿ ಜಾಹೀರಾತು ತೆರವುಗೊಳಿಸಿ: ಮಮತಾ ಸರ್ಕಾರಕ್ಕೆ ಕೋಲ್ಕತಾ ಹೈಕೋರ್ಟ್ ಆದೇಶ

Lingaraj Badiger

ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ವಿರುದ್ಧದ ಸರ್ಕಾರಿ ಪ್ರಾಯೋಜಿತ ಎಲ್ಲಾ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಕೋಲ್ಕತಾ ಹೈಕೋರ್ಟ್ ಸೋಮವಾರ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಆದೇಶಿಸಿದೆ.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದ ಎರಡು ಕಾನೂನುಗಳ ವಿರುದ್ಧ ಅಪಪ್ರಚಾರ ಮಾಡಲು ರಾಜ್ಯ ಸರ್ಕಾರ ಸಾರ್ವಜನಿಕರ ಹಣ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಆರು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, 
ಮುಂದಿನ ವಿಚಾರಣೆವರೆಗೆ ಎಲ್ಲಾ ಜಾಹೀರಾತುಗಳನ್ನು ಹಿಂಪಡೆಯುವಂತೆ ದೀದಿ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿದೆ.

ಮಮತಾ ಬ್ಯಾನರ್ಜಿ ಅವರು, ಜಾಹೀರಾತಿನಲ್ಲಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಎ ಮತ್ತು ಎನ್ ಆರ್ ಸಿ ಅವಕಾಶ ನೀಡುವುದಿಲ್ಲ ಎಂದು ಜನತೆಗೆ ಭರವಸೆ ನೀಡಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಹಾಗೂ ಇತರೆ ಮಾಧ್ಯಮಗಳಲ್ಲಿ ಈ ಜಾಹೀರಾತುಗಳನ್ನು ಪ್ರಕಟಿಸಲಾಗಿತ್ತು.

ಇನ್ನು ಹೈಕೋರ್ಟ್‌ನ ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ, "ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದಲ್ಲಿರುವ ಕೆಲವೇ ಕೆಲವು ವಿದ್ಯಾವಂತ ಸಂಸದರು ಮತ್ತು ಶಾಸಕರ ಸಲಹೆಯನ್ನು ಪಡೆದು ಈ ಜಾಹೀರಾತು ನೀಡಿದ್ದಾರೆ. ಆದರ ನಮ್ಮ ಸಂವಿಧಾನದ ಪ್ರಕಾರ, ಸಿಎಎ ಕೇಂದ್ರ ಪಟ್ಟಿಯಲ್ಲಿರುವ ಒಂದು ಕಾಯ್ದೆಯಾಗಿದ್ದು, ಅದನ್ನು ತಡೆಯುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT