ದೇಶ

'ಏಕತೆ ಮತ್ತು ಶಾಂತಿಯ ಪಾಠ ಚಿನ್ನದ ಪದಕಕ್ಕಿಂತ ದೊಡ್ಡದು':ರಬೀಹಾ ಅಬ್ದುರೆಹಿಮ್

Sumana Upadhyaya

ಪುದುಚೆರಿ(ಚೆನ್ನೈ): ಪುದುಚೆರಿ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್ ಗೆ ಭಾಗವಹಿಸಲು ಬಿಡದೆ ಹೊರಗೆ ಕಳುಹಿಸಿದ ಪೊಲೀಸರ ಕ್ರಮ ವಿವಾದಕ್ಕೆ ಕಾರಣವಾಗಿದೆ. ನಂತರ ವಿಶ್ವವಿದ್ಯಾಲಯದ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್ ತಮ್ಮ ಅಚಲ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳು ಸಮಾರಂಭದಿಂದ ಹೊರಹೋಗುವವರೆಗೆ ನನ್ನನ್ನು ಒಳಗೆ ಬಿಡಲಿಲ್ಲ. ನಂತರ ವೇದಿಕೆ ಮೇಲೆ ಪ್ರೊಫೆಸರ್ ರಾಜೀವ್ ಜೈನ್ ಪ್ರಶಸ್ತಿ, ಪದಕ ನೀಡಲು ಮುಂದಾದಾಗ ವಿ.ವಿ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್ ಮುಂದೆ ಪ್ರತಿಭಟನೆ ಭಾಗವಾಗಿ ಅದನ್ನು ತಿರಸ್ಕರಿಸಿದೆ ಎನ್ನುತ್ತಾರೆ ರಬೀಹಾ.

ಇನ್ನೂ ಹಲವು ಚಿನ್ನದ ಪದಕ ವಿಜೇತರು ಮತ್ತು ವಿದ್ಯಾರ್ಥಿಗಳು ಘಟಿಕೋತ್ಸವನ್ನು ಬಹಿಷ್ಕರಿಸಿ ಸಿಎಎ ಮತ್ತು ಎನ್ ಆರ್ ಸಿ  ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ರಬೀಹಾ ಅವರು ಚಿನ್ನದ ಪದಕ ಮತ್ತು ಪ್ರಮಾಣಪತ್ರ ಸ್ವೀಕರಿಸುವ ಸರದಿ ಬಂದಾಗ ಪದಕ ನಿರಾಕರಿಸಿ ಕೇವಲ ಎಂಎ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. 


ಈ ಘಟನೆ ನನ್ನಲ್ಲಿ ಒಂದು ನಿಲುವು ತಳೆಯುವಂತೆ ಮಾಡಿದೆ. ನನಗೆ ಅವಮಾನ ಮಾಡಿದ್ದಾರೆ ಎಂದು ನಾನು ಚಿನ್ನದ ಪದಕ ಹಿಂತಿರುಗಿಸಲಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ನನ್ನ ಸಹಪಾಠಿಗಳಿಗೆ ಬೆಂಬಲವಾಗಿ ಈ ಪದಕ ಹಿಂತಿರುಗಿಸಿದ್ದೇನೆ ಎಂದು ರಬೀಹಾ ಹೇಳಿದ್ದಾರೆ.


ಇಂದು ಯುವಜನತೆಗೆ ಶಿಕ್ಷಣ ಏನು ಕಲಿಸುತ್ತಿದೆ ಎಂದು ಜಗತ್ತಿಗೆ ನಾನು ತೋರಿಸುತ್ತಿದ್ದೇನೆ, ಐಕ್ಯತೆ ಮತ್ತು ಶಾಂತಿಯ ಪಾಠ ಈ ಪದಕ, ಪ್ರಶಸ್ತಿಗಳಿಗಿಂತ ಹೆಚ್ಚು ಮೌಲ್ಯಯುತವಾದುದು. ಈ ವಿಷಯದಲ್ಲಿ ನನ್ನ ಆಲೋಚನೆ, ಸಂದೇಶ ಸ್ಪಷ್ಟವಾಗಿದೆ ಎಂದು ಕೇರಳದ ಕೋಜಿಕ್ಕೋಡ್  ಮೂಲದ ರಬೀಹಾ ಹೇಳುತ್ತಾರೆ. 

SCROLL FOR NEXT