ದೇಶ

ಶುಕ್ರವಾರ ಪ್ರಾರ್ಥನೆ ಹಿನ್ನೆಲೆ: ಉತ್ತರ ಪ್ರದೇಶದ ವಿವಿಧೆಡೆ ಇಂಟರ್ ನೆಟ್ ಕಟ್, ಡ್ರೋಣ್ ನಿಯೋಜನೆ

Nagaraja AB

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ವಾರ  ನಡೆದ ಪ್ರತಿಭಟನೆ ವೇಳೆಯಲ್ಲಿ ಸಂಭವಿಸಿದ್ದ ವ್ಯಾಪಕ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ಪ್ರಾರ್ಥನೆ ವೇಳೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಭದ್ರತೆ ಹಾಗೂ ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದೆ.

ವದಂತಿ, ಸುಳ್ಳು ಸುದ್ದಿ ಹರಡದಂತೆ  ತಡೆಯುವ ನಿಟ್ಟಿನಲ್ಲಿ  ಗಾಜಿಯಾಬಾದ್ ಮತ್ತಿತರ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 

ಗೋರಕ್ ಪುರದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಹಿಂಸಾಚಾರ ಮರುಕಳಿಸದಂತೆ ಮಾಡಲು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಎಲ್ಲಾ ಪೊಲೀಸ್ ಠಾಣೆ ಪ್ರದೇಶ ಹಾಗೂ ವೃತ್ತಗಳಲ್ಲಿ ಶಾಂತಿ ಸೌಹಾರ್ದತ ಸಭೆಗಳನ್ನು ಆಯೋಜಿಸಲಾಗಿದೆ. 

ಶುಕ್ರವಾರ ಸೂಕ್ತ ಭದ್ರತೆ ಒದಗಿಸಲು ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಡಿಎಂ ವಿಜಯೇಂದ್ರ ಪಾಂಡಿಯನ್ ತಿಳಿಸಿದ್ದಾರೆ. 

ಈ ಮಧ್ಯೆ ಪ್ರತಿಭಟನೆ ವೇಳೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ 372 ಜನರ ವಿರುದ್ಧ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ನಡೆದ ಹಿಂಸಾಚಾರದಲ್ಲಿ 19 ಮಂದಿ ಮೃತಪಟ್ಟಿದ್ದರು.  61 ಮಂದಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 288 ಪೊಲೀಸರು ಗಾಯಗೊಂಡಿದ್ದರು.  ಈ ಸಂಬಂಧ 327 ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದ್ದು, 1 ಸಾವಿರದ 113 ಮಂದಿಯನ್ನು ಬಂಧಿಸಲಾಗಿದೆ  ಎಂದು ಗೃಹ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. 

SCROLL FOR NEXT