ದೇಶ

130 ಕೋಟಿ ಭಾರತೀಯರೂ ಹಿಂದೂಗಳೇ ಎಂದಿದ್ದ ಮೋಹನ್ ಭಾಗವತ್ ವಿರುದ್ಧ ಕೇಸ್

Lingaraj Badiger

ಹೈದರಾಬಾದ್: ದೇಶದ 130 ಕೋಟಿ ಭಾರತೀಯರೂ ಹಿಂದೂಗಳೇ ಎಂದು ಹೇಳಿಕೆ ನೀಡಿದ್ದ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ವಿ ಹನುಮಂತ ರಾವ್ ಅವರು ಕೇಸ್ ದಾಖಲಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಎಲ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿರುವ ಕಾಂಗ್ರೆಸ್ ನಾಯಕ, ಮೋಹನ್ ಭಾಗವತ್ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಹೈದರಾಬಾದಿನಲ್ಲಿ ನಡೆದ ಆರ್‌ಎಸ್ಎಸ್ ನ ಮೂರು ದಿನಗಳ ‘ವಿಜಯ್ ಸಂಕಲ್ಪ ಸಭಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಭಾಗವತ್, ಭಾರತ ಮಾತೆಯ 130 ಕೋಟಿ ಪುತ್ರರು ಯಾವುದೇ ಭಾಷೆಯನ್ನು ಬೇಕಾದರೆ ಮಾತನಾಡಲಿ, ಯಾವುದೇ ಧರ್ಮ ಆಚರಣೆಯನ್ನು ಅನುಸರಿಸಲಿ. ಇವರೆಲ್ಲ ಹಿಂದೂ ಧರ್ಮವನ್ನು ಆಚರಿಸದೇ ಇದ್ದರೂ ಸಂಘದ ಪಾಲಿಗೆ ಇವರೆಲ್ಲರೂ ಹಿಂದೂಗಳೇ ಎಂದು ಹೇಳಿದ್ದರು.

ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾಗಿದೆ. ಭಾರತದ ಮೋಕ್ಷ ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ ಉತ್ತಮ ಸಮಾಜ ಮತ್ತು ಹಿಂದುತ್ವದಿಂದ ಸಾಧ್ಯವಿದೆ ಎಂದು ಹೇಳಿದ್ದರು.

SCROLL FOR NEXT