ಹೈದರಾಬಾದ್: ಒಮನ್ ನಲ್ಲಿ ಆಕರ್ಷಕ ವೇತನದ ಉದ್ಯೋಗ ನೀಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದ ಹೈದರಾಬಾದ್ ಮೂಲದ ಯುವತಿ ಗಲ್ಫ್ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದು ಆಕೆಯ ಸುರಕ್ಷಿತ ಬಿಡುಗಡೆಗೆ ಸಹಾಯ ಮಾಡಬೇಕೆಂದು ಯುವತಿಯ ತಾಯಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯುವತಿಯ ತಾಯಿ ರಶೀದಾ ಬೇಗಮ್, ಶಹೀದಾ ಎಂಬ ಮಹಿಳೆ ನನ್ನ ಮಗಳನ್ನು ಸಂಪರ್ಕಿಸಿ ಒಮನ್ ನಲ್ಲಿ ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ನಂಬಿಸಿದಳು. ತಿಂಗಳಿಗೆ 25 ಸಾವಿರ ರೂಪಾಯಿ ವೇತನ ಕೊಡಿಸುವುದಾಗಿ ಹೇಳಿದಳು.
ಆಕೆಯ ಮಾತನ್ನು ನಂಬಿ ಕಳೆದ ವರ್ಷ ಡಿಸೆಂಬರ್ 9ರಂದು ನನ್ನ ಮಗಳು ಒಮನ್ ಗೆ ಹೋದಳು. ಅಲ್ಲಿ ಹೋದ ನಂತರ ಒಂದು ಕಚೇರಿಯಲ್ಲಿ ಅವಳನ್ನು ಕೂಡಿ ಹಾಕಿ ನಂತರ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸುತ್ತಿದ್ದಾರೆ. ಇದುವರೆಗೆ ವೇತನ ನೀಡಿಲ್ಲ. ಸರಿಯಾದ ಆಹಾರ ಕೂಡ ನೀಡಿಲ್ಲ ಎನ್ನುತ್ತಾರೆ.
ಒಮನ್ ಗೆ ಕರೆದುಕೊಂಡ ಹೋದ ಏಜೆಂಟ್ ನನ್ನ ಮಗಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ವಿಷಯ ತಿಳಿದು ಶಹೀದಾಳನ್ನು ಸಂಪರ್ಕಿಸಿ ಕೇಳಿದಾಗ ನಿಮ್ಮ ಮಗಳನ್ನು ವಾಪಸ್ ಭಾರತಕ್ಕೆ ಕಳುಹಿಸಬೇಕೆಂದರೆ 2 ಲಕ್ಷ ರೂಪಾಯಿ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.
ನನ್ನ ಮಗಳು ಒಮನ್ ನಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾಳೆ. ಅಲ್ಲಿ ಚೆನ್ನಾಗಿ ಕೆಲಸ ಮಾಡಿಸಿಕೊಂಡು ಸರಿಯಾಗಿ ಆಹಾರ. ವಸತಿ, ವೇತನ ನೀಡುತ್ತಿಲ್ಲ. ನನ್ನ ಮಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರುವಲ್ಲಿ ಸುಷ್ಮಾ ಸ್ವರಾಜ್ ಸಹಾಯ ಮಾಡಬೇಕೆಂದು ರಶೀದಾ ಕೋರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos