ದೇಶ

ಸಿಬಿಐ ವರ್ಸಸ್ ಕೋಲ್ಕತಾ ಪೊಲೀಸ್; ಕೇಂದ್ರದ ವಿರುದ್ಧ ಸಿಎಂ ಮಮತಾ ಧರಣಿ, ವಿಪಕ್ಷಗಳಿಂದ ದೀದಿಗೆ ಬೆಂಬಲ

Srinivasamurthy VN
ನವದೆಹಲಿ: ಸಿಬಿಐ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರತಿಭಟನೆಗೆ ವಿಪಕ್ಷ ನಾಯಕರು ಬೆಂಬಲ ಸೂಚಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತ್ತ ಕೋಲ್ಕತಾದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಆಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಇತ್ತ ಟ್ವಿಟರ್ ನಲ್ಲಿ ಪ್ರತಿಪಕ್ಷ ನಾಯಕರು ಸರಣಿ ಟ್ವೀಟ್  ಗಳನ್ನು ಮಾಡುವ ಮೂಲಕ ದೀದಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಅಲ್ಲದೆ ಹಲವು ರಾಜಕೀಯ ನಾಯಕರು ತಾವೂ ಕೂಡ ಕೋಲ್ಕತಾಗೆ ತೆರಳಿ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಒಬ್ದುಲ್ಲಾ ಸೇರಿದಂತೆ ಹಲವು ಮುಖಂಡರು ಮಮತಾ ಬೆಂಬಲಕ್ಕೆ ನಿಂತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಈ ಬಗ್ಗೆ ಟ್ವೀಟ್​ ಮಾಡಿದ್ದು, ಈಗಷ್ಟೇ ಮಮತಾ ದೀದಿ ಜೊತೆಗೆ ಮಾತನಾಡಿದ್ದೇನೆ. ಮೋದಿ ಮತ್ತು ಅಮಿತ್​ ಷಾ ಇಬ್ಬರ ನಡವಳಿಕೆಯೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದಿದ್ದಾರೆ. ಕರ್ನಾಟಕ ಕಾಂಗ್ರೆಸ್​ ಕೂಡ ತನ್ನ ಟ್ವಿಟ್ಟರ್​ ಖಾತೆಯಲ್ಲಿ ದೀದಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ಪಶ್ಚಿಮ ಬಂಗಾಳದಲ್ಲಿ, ಕೇಂದ್ರ ಸರ್ಕಾರದ ನಡೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಅಣಕ ಮಾಡುವಂತಿದೆ. ಸಿಆರ್ ಪಿಎಫ್ ತುಕಡಿಯನ್ನು ನೇಮಕ ಮಾಡಿ, ಸರ್ಚ್ ವಾರೆಂಟ್ ಇಲ್ಲದೆ ಪೊಲೀಸ್ ಕಮಿಷನರ್ ಕಚೇರಿಗೆ ನುಗ್ಗುವುದು ಎಂದರೆ ಕೇಂದ್ರ ಸರ್ಕಾರದ ಪ್ರಕಾರ ಕಾನೂನು ಬದ್ಧವೇ? ಎಂದು ಟ್ವೀಟ್​ ಮಾಡಿದೆ.
ಈ ಘಟನೆಯ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್​ ಮಾಡಿದ್ದು, ಕೊಲ್ಕತಾದಲ್ಲಿ ಪೊಲೀಸ್​ ಆಯುಕ್ತರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ವಿಷಯ ಕೇಳಿ ನನಗೆ ಆಘಾತವಾಗಿದೆ. ಮೋದಿ ಸರ್ಕಾರದ ಆಳ್ವಿಕೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನಪಿಸುತ್ತಿದೆ. ಆ ಸಮಯದಲ್ಲೂ ಇದೇ ರೀತಿ ಅಸಾಂವಿಧಾನಿಕ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು. ಪಶ್ಚಿಮ ಬಂಗಾಳದ ಇಂದಿನ ಪರಿಸ್ಥಿತಿಗೂ ತುರ್ತು ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದು ದೇವೇಗೌಡರು ಟ್ವೀಟ್​ ಮಾಡಿದ್ದಾರೆ. 
SCROLL FOR NEXT