ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಶಾರದಾ ಚಿಟ್ ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣದ ವಿಚಾರಣೆ ನಡೆಸಲು ಕೊಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಮನೆಗೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆಯುತ್ತಿದ್ದು, ತಮ್ಮ ಗಮನಕ್ಕೆ ತಾರದೆ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆ ನಡೆಸಲು ಬಂದಿದ್ದ ಸಿಬಿಐ ನಡೆಯ ಬಗ್ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ ಕೇಂದ್ರ ಸರ್ಕಾರದ ನಡೆ ವಿರುದ್ಧ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷದ ಕೆಲ ಹಿರಿಯ ಸಚಿವ ಮತ್ತು ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಇನ್ನು ಇಂದಿನಿಂದ ಪಶ್ಚಿಮ ಬಂಗಾಳದ ಕಲಾಪ ಆರಂಭವಾಗಲಿದ್ದು, ಧರಣಿಯ ಸ್ಥಳದಲ್ಲೇ ಅಧಿವೇಶನ ನಡೆಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ದೇಶದ ಸ್ಥಿತಿ ತುರ್ತುಸ್ಥಿತಿ ಸಂದರ್ಭಕ್ಕಿಂತ ಕಡೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಮಮತಾ ವಾಗ್ದಾಳಿ ನಡೆಸಿದ್ದಾರೆ. ಹಾಗೇ, ನಮ್ಮ ರಾಜ್ಯದವರಿಗೆ ರಕ್ಷಣೆ ನೀಡುವುದು ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ. ನಮ್ಮ ಗಮನಕ್ಕೆ ತಾರದೆ ಹೇಗೆ ನೀವು ನಮ್ಮ ರಾಜ್ಯದ ಅಧಿಕಾರಿಗಳ ಮೇಲೆ ಮುತ್ತಿಗೆ ಹಾಕಿದಿರಿ? ಎಂದು ಪ್ರಶ್ನಿಸಿದ್ದಾರೆ.