ಮುಂಬೈ: ಮದುವೆಯಾಗುವ ಮುನ್ನ ವಧುವನ್ನು ಬಲವಂತವಾಗಿ ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ ಹೇಳಿದೆ.
ರಾಜ್ಯದಲ್ಲಿ ಕೆಲ ಸಮುದಾಯಗಳಲ್ಲಿ ಹೊಸದಾಗಿ ಮದುವೆಯಾದ ವಧು ತಾನು ಮದುವೆಗೆ ಮುನ್ನ ಕನ್ಯೆಯಾಗಿದ್ದೆ ಎಂದು ಸಾಬೀತುಪಡಿಸುವ ಆಚರಣೆಗಳನ್ನು ಪಾಲಿಸಲಾಗುತ್ತಿದೆ.
ಈ ಸಂಬಂಧ ಕೆಲವು ಸಂಘ ಸಂಸ್ಥೆಗಳ ನಿಯೋಗ ಇಂದು ಗೃಹ ಸಚಿವ ರಂಜೀತ್ ಪಾಟಿಲ್ ಅವರನ್ನು ಭೇಟಿಯಾದಾಗ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಸಮಾಲೋಚನೆಯ ನಂತರ ಕನ್ಯತ್ವ ಪರೀಕ್ಷೆಯನ್ನು ಲೈಂಗಿಕ ದೌರ್ಜನ್ಯದ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಕನ್ಯತ್ವ ಪರೀಕ್ಷೆಯು ಶಿಕ್ಷಾರ್ಹ ಅಪರಾಧ ಎಂದು ಸುತ್ತೋಲೆಯನ್ನು ಹೊರಡಿಸಲಾಗುತ್ತದೆ ಎಂದರು.
ಶಿವ ಸೇನಾ ವಕ್ತಾರ ನೀಲಮ್ ಗೋರ್ಹೆ ಸೇರಿದಂತೆ ಕೆಲ ಸಾಮಾಜಿಕ ಸಂಘಟನೆಗಳ ನಿಯೋಗವು ಗೃಹ ಸಚಿವ ರಂಜೀತ್ ಪಾಟಿಲ್ರನ್ನು ಭೇಟಿ ಮಾಡಿ, ಕನ್ಯತ್ವ ಪರೀಕ್ಷೆ ನಿಷೇಧಿಸುವಂತೆ ಸಚಿವರಿಗೆ ಮನವಿ ಮಾಡಿದರು.